ಭಾರತದಲ್ಲಿ ಕೃಷಿಯ ನಂತರದ ಅತಿದೊಡ್ಡ ಉದ್ಯಮವೊಂದಿದೆ ಎಂದರೆ ಅದು ಕೈಮಗ್ಗ. ಇದು ಭಾರತ ದೇಶದ ಶತಮಾನಗಳ ಪಾರಂಪರಿಕ ಕಲೆಯ ಪ್ರತಿರೂಪವಾಗಿದ್ದು, ಅನೇಕ ಕುಟುಂಬಗಳ ಜೀವನೋಪಾಯದ ಮೂಲವಾಗಿದೆ. ವಿವಿಧ ರಾಜ್ಯಗಳಲ್ಲಿ ಕೈಮಗ್ಗದಿಂದ ತಯಾರಾದ ಮೈಸೂರು ಸೀರೆ, ಕಾಂಜೀವರಂ, ಬಂಧನಿ, ಕಲಮಕಾರಿ ಮುಂತಾದ ವಿಶಿಷ್ಟ ಶೈಲಿಯ ವಸ್ತ್ರಗಳು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಕೀರ್ತಿಯನ್ನು ಗಳಿಸಿವೆ.
ಆಗಸ್ಟ್ 7 ರಂದು ಆಚರಿಸಲಾಗುವ ರಾಷ್ಟ್ರೀಯ ಕೈಮಗ್ಗ ದಿನದ ಹಿಂದಿನ ಇತಿಹಾಸವನ್ನು ನೋಡಿದರೆ, ಇದು 1905ರಲ್ಲಿ ನಡೆದ ಸ್ವದೇಶಿ ಚಳುವಳಿಯ ಸ್ಮರಣಾರ್ಥ. ಬ್ರಿಟಿಷ್ ಆಡಳಿತದ ಸಮಯದಲ್ಲಿ ವಿದೇಶೀ ವಸ್ತುಗಳನ್ನು ಬದಿಗೊತ್ತಿ ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುವ ಚಳುವಳಿಯು ಕೈಮಗ್ಗ ಉದ್ಯಮಕ್ಕೆ ಹೊಸ ಆಯಾಮವನ್ನೇ ತಂದುಕೊಟ್ಟಿತು. ಈ ಚಳುವಳಿಯ ತಳಮಟ್ಟದ ನಾಯಕರು ನೇಕಾರ ಸಮುದಾಯದವರೇ ಆಗಿದ್ದರು.
2015ರಿಂದ ದೇಶದ ಕೈಮಗ್ಗ ಪರಂಪರೆಯನ್ನು ಗೌರವಿಸಲು, ನೇಕಾರರ ಶ್ರಮವನ್ನು ಸ್ಮರಿಸಲು, ಅವರ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಪ್ರಾರಂಭಿಸಲಾಯಿತು. ಈ ದಿನದಂದು ದೇಶದ ವಿವಿಧ ಭಾಗಗಳಲ್ಲಿ ಕೈಮಗ್ಗ ಪ್ರದರ್ಶನಗಳು, ಕರಕುಶಲ ಮೇಳಗಳು, ವಿಚಾರ ಸಂಕಿರಣಗಳು ಮತ್ತು ಫ್ಯಾಷನ್ ಶೋಗಳನ್ನೂ ಆಯೋಜಿಸಲಾಗುತ್ತದೆ.
ಇಂದಿನ ಪಾಶ್ಚಾತ್ಯ ಪ್ರಭಾವದ ನಡುವೆ ಈ ರೀತಿ ದಿನಗಳ ಆಚರಣೆಯು ನಮ್ಮ ದೇಶದ ಸಾಂಸ್ಕೃತಿಕ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಲು ಅಗತ್ಯವಾಗಿದೆ. ಕೈಮಗ್ಗ ವಸ್ತುಗಳನ್ನು ಆಯ್ಕೆ ಮಾಡುವ ಮೂಲಕ ನಾವು ನೇಕಾರರ ಜೀವನಕ್ಕೆ ಬೆಳಕು ನೀಡಬಹುದು.