ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಬೋಟಿಕ್, ಜೆನೆಟಿಕ್ ಇಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇವು ಮಾನವ ಕುಲಕ್ಕೆ ಅಪಾಯಕಾರಿ ಆಗಿವೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಸ್ಥಾಪಕ ಕೆ.ಎನ್. ಗೋವಿಂದಾಚಾರ್ಯ ಆತಂಕ ವ್ಯಕ್ತಪಡಿಸಿದರು.
ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ಸಾರಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಮೂರು ದಿನಗಳ ಪ್ರಕೃತಿ ಸಂವಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಹುಟ್ಟುವುದೇ ದುರ್ಲಭ. ಪೂರ್ವಜರ ಸಂಸ್ಕಾರದ ಕಾರಣ ಇಲ್ಲಿ ಜನ್ಮ ಸಿಕ್ಕಿದೆ. ಅದರೆ ಈ ಜನ್ಮಕ್ಕೆ ಅನೇಕ ಸವಾಲು, ಜಂಜಾಟ, ಅಪಾಯ ಎದುರಾಗಿದೆ ಎಂದರು.
ಮನುಷ್ಯನ ಕೈ ಮತ್ತು ಹೊಟ್ಟೆ ಖಾಲಿ ಆಗುತ್ತಿದೆ. ಖಾಲಿ ಮೆದುಳು ದೆವ್ವಗಳ ಆವಾಸ ಸ್ಥಾನ ಆಗುತ್ತದೆ. ಮೆದುಳು ಖಾಲಿ ಇರಲು ಬಳಸಬಾರದು ಎಂದರು.
ಆಧುನಿಕ ತಂತ್ರಜ್ಞಾನದ ಪರಿಣಾಮ ಹೇಗಿದೆ ಎಂದರೆ, ವಿಶ್ವಕ್ಕೆ ೬೨ ಕೋಟಿ ಜನರು ಸಾಕು. ಉಳಿದವರು ವ್ಯರ್ಥ. ಅವರು ಇಲ್ಲದೇ ಇದ್ದರೂ ನಡೆಯುತ್ತದೆ ಎಂಬ ಭಾವನೆ ಇದೆ. ಹಾಗಾಗಿಯುವಕರ ಮುಂದೆ ಸವಾಲುಗಳಿವೆ. ಅವರು ಹೇಗೆ ಎದುರಿಸುತ್ತಾರೆ ? ಎಂಬುದರ ಮೇಲೆ ಭವಿಷ್ಯ ಅಡಗಿದೆ ಎಂದರು.
ಜೀವ, ಜಗದೀಶ, ಆತ್ಮ, ಪರಮಾತ್ಮ ಸಂಬಂಧ ಮೊದಲು ತಿಳಿದುಕೊಳ್ಳಬೇಕು. ಎರಡು ವಿಶ್ವ ಯುದ್ಧಗಳಾಗಿದೆ. ಯುದ್ಧದ ಬಳಿಕ ವಿಶ್ವಶಾಂತಿ, ಸುಸ್ಥಿರತೆ ಬಗ್ಗೆ ಹೇಳಲಾಗಿತ್ತು. ರಷ್ಯಾ- ಯುಕ್ರೇನ್ ಯುದ್ಧ, ಇಸ್ರೇಲ್ ಕದನ, ಇರಾನ್ ದಂಗೆ, ಹೌತಿ- ಹಮಾಸ್ ಇವುಗಳೆಲ್ಲಾ ಏನು ಸಂದೇಶ ಕೊಡುತ್ತವೆ? ದುರ್ಬಲರನ್ನು ತುಳಿದು ಉಳ್ಳವರು ಮಾತ್ರ ಬದುಕುವುದು ಆಗಬಾರದು ಎಂದರು.
ಪ್ರೊ.ಬಿ.ಎಂ.ಕುಮಾರಸ್ವಾಮಿ, ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷ, ಎಂ.ಶಂಕರ್, ಚಂದ್ರಶೇಖರ್ ಪ್ರಾಣ್, ಚರಕ ಸಂಸ್ಥೆಯ
ಪ್ರಸನ್ನ, ಬಸವರಾಜ ಪಾಟೀಲ್ ವೀರಾಪುರ, ಚಂದ್ರಶೇಖರ್ ಧವಳಗಿ, ಸಾರಾ ಸಂಸ್ಥೆಯ ಮಂಜುನಾಥ ಬ್ಯಾಣದ್ ಇನ್ನಿತರರು ಉಪಸ್ಥಿತರಿದ್ದರು. ಈಶ್ವರೀಯ ವಿಶ್ವವಿದ್ಯಾಲಯದ
ರಾಜಯೋಗಿನಿ ಅನುಸೂಯಕ್ಕ ಅಧ್ಯಕ್ಷತೆ ವಹಿಸಿದ್ದರು.