ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋ ನಲ್ಲಿ ಅಶ್ಲೀಲ ಹೇಳಿಕೆ ನೀಡಿ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದ್ದ ಯೂಟ್ಯೂಬ್ಗಳಾದ ರಣವೀರ್ ಅಲ್ಲಾಬಾಡಿಯಾ ಮತ್ತು ಅಪೂರ್ವ ಮುಖಿಜಾ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕ್ಷಮೆಯಾಚಿಸಿದ್ದಾರೆ.
NCW ಮುಂದೆ ರಣವೀರ್ ಅಲ್ಲಾಬಾಡಿಯಾ, ಅಪೂರ್ವ ಮುಖಿಜಾ ಮತ್ತು ಶೋ ನಿರ್ಮಾಪಕರಾದ ಸೌರಭ್ ಬೋತ್ರಾ, ತುಷಾರ್ ಪೂಜಾರಿ ವಿಚಾರಣೆ ಹಾಜರಾಗಿದ್ದು, ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ NCW ಮುಖ್ಯಸ್ಥೆ ವಿಜಯ ರಾಹತ್ಕರ್, ಅನುಚಿತ ಭಾಷೆಯ ಬಳಕೆಯನ್ನು ಸಹಿಸುವುದಿಲ್ಲ. ಅಂತಹ ಟೀಕೆಗಳು ಕೇವಲ ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಆಯೋಗದ ಮುಂದೆ ಹಾಜರಾದ ಅವರು ತಮ್ಮ ಹೇಳಿಕೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾತನಾಡಬಾರದಿತ್ತು ಎಂದು ಹೇಳಿದ್ದು ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ ಎಂದು ಅವರು ತಿಳಿಸಿದರು.
ಬಿಯರ್ ಬೈಸೆಪ್ಸ್ ಸೇರಿದಂತೆ ಹಲವಾರು ಯೂಟ್ಯೂಬ್ ಚಾನೆಲ್ಗಳನ್ನು ನಡೆಸುತ್ತಿರುವ ಅಲ್ಲಾಬಾಡಿಯಾ, ರೈನಾ ನಡೆಸಿಕೊಡುವ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಪೋಷಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ನಂತರ ಅಲ್ಲಾಬಾಡಿಯಾ ವಿರುದ್ಧ ಅನೇಕ ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದ. ಆತನ ಮನಸ್ಥಿತಿಯನ್ನು ಕೊಳಕು ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು. ಆದರೆ ಬಂಧನದಿಂದ ರಕ್ಷಿಸಿತ್ತು.