ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೀಟ್ ಯುಜಿ ಪ್ರಶ್ನೆ ಪತ್ರಿಕೆಯಲ್ಲಿ ಸೋರಿಕೆ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಟೀಕೆಗಳ ಸುರಿಮಳೆ ಸುರಿಸುತ್ತಿದೆ.
ಈ ಸಂಬಂಧ ಮೋದಿ ಸರಕಾರದ ವಿರುದ್ಧ ಕಿಡಿಕಾರಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 22 ಲಕ್ಷ ಮಕ್ಕಳ ಕನಸು ನುಚ್ಚುನೂರಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಬಿಜೆಪಿಯ ಭ್ರಷ್ಟಾಚಾರದಿಂದ 2026 ರ ನೀಟ್ ಪರೀಕ್ಷೆ ರದ್ದಾಗಿದೆ. ಈ ಮೂಲಕ 22 ಲಕ್ಷ ಮಕ್ಕಳ ಪರಿಶ್ರಮ, ತ್ಯಾಗ, ಕನಸು ಎಲ್ಲವೂ ಮುರಿದು ಬಿದ್ದಿವೆ ಎಂದು ಬರೆದುಕೊಂಡಿದ್ದಾರೆ.
ಮಕ್ಕಳ ಭವಿಷ್ಯಕ್ಕೆ ಹೆತ್ತವರು ಸಾಲ ಮಾಡಿ ಓದಿಸಿದ್ದರು. ಇನ್ನು ಕೆಲವರು ತಮ್ಮ ಆಭರಣಗಳನ್ನು ಅಡವಿಟ್ಟರು. ಅತ್ತ ಮಕ್ಕಳು ಪರೀಕ್ಷೆಗಾಗಿ ನಿದ್ದೆಗೆಟ್ಟು ಓದಿದ್ದರು. ಆದರೆ ಸರ್ಕಾರದ ನಿರ್ಲಕ್ಷ್ಯ ಹಾಗೂ ವ್ಯವಸ್ಥಿತ ಭ್ರಷ್ಟಾಚಾರದಿಂದ ಪತ್ರಿಕೆ ಸೋರಿಕೆಯಾಗಿದೆ ಎಂದು ಟೀಕಿಸಿದರು.
ಇದು ಯುವಕರ ಭವಿಷ್ಯದ ಜೊತೆ ನಡೆದಿರುವ ಅಪರಾಧ. ಪ್ರತಿ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ನಡೆಸಿದವರು ಆರಾಮಾಗಿ ಇರುತ್ತಾರೆ. ಪರೀಕ್ಷೆಗಾಗಿ ಕಷ್ಟ ಪಟ್ಟ ಮಕ್ಕಳು ಮಾತ್ರ ಇಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.



