ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿಯಲ್ಲಿ ಮುಂದುವರಿಯುತ್ತಿರುವ ಪಾಕಿಸ್ತಾನ-ಚೀನಾಗಳಂತಹ ನೆರೆದೇಶಗಳ ಉಪಟಳದ ಹಿನ್ನಲೆಯಲ್ಲಿ, ಭಾರತೀಯ ಸೇನೆ ಭವಿಷ್ಯದ ಯುದ್ಧ ತಂತ್ರಗಳಿಗೆ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಸೇನಾ ಮುಖ್ಯಸ್ಥ ಜ. ಉಪೇಂದ್ರ ದ್ವಿವೇದಿ ಅವರು ಹೊಸದಾಗಿ ‘ರುದ್ರ’ ಎಂಬ ಬ್ರಿಗೇಡ್ ಮತ್ತು ‘ಭೈರವ’ ಎಂಬ ವಿಶೇಷ ಬೆಟಾಲಿಯನ್ ಸ್ಥಾಪನೆ ಮಾಡಲಾಗುವುದಾಗಿ ಘೋಷಣೆ ಮಾಡಿದ್ದಾರೆ.
ಕಾರ್ಗಿಲ್ ವಿಜಯ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಭದ್ರತಾ ಸವಾಲುಗಳು ನಿರಂತರವಾಗಿ ಬದಲಾಗುತ್ತಿರುವುದರಿಂದ, ಭಾರತೀಯ ಸೇನೆ ಆಧುನೀಕರಣದತ್ತ ಹೆಜ್ಜೆ ಹಾಕುತ್ತಿದೆ. ಭವಿಷ್ಯದ ಅಗತ್ಯತೆಗಳನ್ನು ಭಾವಿಸಿ ಎಲ್ಲಾ ಶಸ್ತ್ರದಳಗಳ ಸಮನ್ವಯದೊಂದಿಗೆ ಹೊಸ ಘಟಕಗಳನ್ನು ರೂಪಿಸಲಾಗುತ್ತಿದೆ” ಎಂದು ಅವರು ಹೇಳಿದರು.
‘ರುದ್ರ’ ಬ್ರಿಗೇಡ್ನಲ್ಲಿ ಶಸ್ತ್ರಸಜ್ಜಿತ ಪದಾತಿದಳ, ಫಿರಂಗಿ ಘಟಕಗಳು, ಮಾನವರಹಿತ ವೈಮಾನಿಕ ವ್ಯವಸ್ಥೆಗಳು, ಶಸ್ತ್ರಾಸ್ತ್ರ ಸಾಗಣೆ ಘಟಕಗಳು ಹಾಗೂ ವಿಶೇಷ ಪಡೆಗಳು ಇರಲಿವೆ. ಈಗಾಗಲೇ ಎರಡು ಪದಾತಿದಳಗಳನ್ನು ‘ರುದ್ರ’ ದಳವಾಗಿ ಪರಿವರ್ತನೆ ಮಾಡಲಾಗಿದೆ.
ಇದರ ಜೊತೆಗೆ ಗಡಿ ಕಾಯಲು ಮಾರಕ ಸಾಮರ್ಥ್ಯವಿರುವ ‘ಭೈರವ’ ಎಂಬ ವಿಶೇಷ ಬೆಟಾಲಿಯನ್ ಸ್ಥಾಪನೆಯೂ ಪ್ರಾರಂಭವಾಗುತ್ತಿದೆ. ಈ ಘಟಕಗಳಲ್ಲಿ ಡ್ರೋನ್ ಸಾಮರ್ಥ್ಯ, ‘ದಿವ್ಯಾಸ್ತ್ರ’ ಎಂಬ ಹೊಸ ತಂತ್ರಜ್ಞಾನದ ಅಳವಡಿಕೆ ಹಾಗೂ ನಿಖರ ಗುರಿ ತಲುಪಬಲ್ಲ ಫಿರಂಗಿ ಬ್ಯಾಟರಿಗಳನ್ನು ಸೇರ್ಪಡೆ ಮಾಡಲಾಗಿದೆ.