ಹೊಸದಿಗಂತ ವರದಿ ಮಂಗಳೂರು:
ಹೊಸವರ್ಷ ಸಂಭ್ರಮಾಚರಣೆ ಹೆಸರಿನಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗತಂದ ಆರೋಪದಲ್ಲಿ 14 ಮಂದಿಯನ್ನು ವಶಕ್ಕೆ ಪಡೆದಿರುವ ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸರು ಈ ಸಂಬಂಧ ಒಟ್ಟು ಎಂಟು ದ್ವಿಚಕ್ರ ವಾಹನ ಹಾಗೂ ಒಂದು ಕಾರನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಉಡುಪಿಯ ಮಣಿಪಾಲದ ರಸ್ತೆಯಲ್ಲಿ ಸುಮಾರು ಹತ್ತು ಮಂದಿ ಡಿ.31ರ ಮಧ್ಯರಾತ್ರಿ ಕಾರು ಹಾಗೂ ದ್ವಿ ಚಕ್ರ ವಾಹನಗಳಲ್ಲಿ ಸವಾರಿ ಮಾಡಿಕೊಂಡು ಬಂದು ಸಾರ್ವಜನಿಕರಿಗೆ ತೊಂದರೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ವಿಡಿಯೋ ದೃಶ್ಯಾವಳಿಗಳನ್ನು ತನಿಖೆಗೊಳಪಡಿಸಿದ ಪೊಲೀಸರು ಆರೋಪಿಗಳ ಮಾಹಿತಿ ಪಡೆದು ಅವರನ್ನು ಹಾಗೂ ವಾಹನಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಬೈಕ್ ನ ಸೈಲೆನ್ಸರ್ ನಲ್ಲಿ ಬೆಂಕಿಯ ಕಿಡಿ ಬರುವ ರೀತಿ ಅಪಾಯಕಾರಿಯಾಗಿ ಚಾಲನೆ, ರಸ್ತೆ ಮಧ್ಯ ವಾಹನ ನಿಲ್ಲಿಸಿ ಸುಗಮ ಸಂಚಾರಕ್ಕೆ ತೊಂದರೆ ಆರೋಪದಲ್ಲಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ.