ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 16ರಂದು ಯೆಮೆನ್ನಲ್ಲಿ ಗಲ್ಲು ಶಿಕ್ಷೆ ನಿಗದಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆ ಮಾಡಿಸಲು ಅಥವಾ ಮರಣದಂಡನೆಯನ್ನು ತಡೆಯಲು ಸೀಮಿತ ಆಯ್ಕೆಗಳಿವೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಸರ್ಕಾರದ ಹಸ್ತಕ್ಷೇಪಕ್ಕೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಈ ವಿಷಯದಲ್ಲಿ ಭಾರತವು ಏನೆಲ್ಲ ಪ್ರಯತ್ನಿಸಬಹುದೋ ಈಗಾಗಲೇ ಆ ಎಲ್ಲ ಮಿತಿಯನ್ನು ತಲುಪಿದೆ ಎಂದು ಹೇಳಿದ್ದಾರೆ.
ಭಾರತ ಸರ್ಕಾರವು ಹೆಚ್ಚಿನದನ್ನು ಏನೂ ಮಾಡಲು ಸಾಧ್ಯವಿಲ್ಲ. ಯೆಮೆನ್ನ ಸೂಕ್ಷ್ಮತೆಯನ್ನು ನೋಡಿದರೆ ಅದು ರಾಜತಾಂತ್ರಿಕವಾಗಿ ಗುರುತಿಸಲ್ಪಟ್ಟಿಲ್ಲ. ನಿಜವಾಗಿ ಏನು ನಡೆಯುತ್ತಿದೆ ಎಂದು ನಮಗೆ ತಿಳಿಯಲು ಯಾವುದೇ ಮಾರ್ಗವಿಲ್ಲ. ನಿಮಿಷಾ ಅವರನ್ನು ಉಳಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಿಸಿದೆ. ಇನ್ನೂ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಭಾರತ ಸರ್ಕಾರವು ಎಲ್ಲಿಯವರೆಗೆ ಹೋಗಬಹುದೋ ನಾವು ಅದನ್ನು ತಲುಪಿದ್ದೇವೆ. ಯೆಮೆನ್ ಪ್ರಪಂಚದ ಬೇರೆ ಯಾವುದೇ ಭಾಗದಂತೆ ಅಲ್ಲ. ಸಾರ್ವಜನಿಕವಾಗಿ ಮಾತನಾಡುವ ಮೂಲಕ ನಾವು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಲು ಬಯಸಲಿಲ್ಲ. ನಾವು ಖಾಸಗಿ ಮಟ್ಟದಲ್ಲಿಯೇ ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ನಿಮಿಷಾ ಅವರ ಗಲ್ಲು ಶಿಕ್ಷೆಯನ್ನು ತಡೆಯಲು ಉಳಿದಿರುವ ಏಕೈಕ ಮಾರ್ಗವೆಂದರೆ ಬ್ಲಡ್ ಮನಿ (ಮೃತರ ಕುಟುಂಬಕ್ಕೆ ಅವರು ಕೇಳಿದಷ್ಟು ಆರ್ಥಿಕ ಸಹಾಯ ನೀಡುವುದು) ಮಾತ್ರ. ಆದರೆ, ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಇದು ನಿಮಿಷಾ ಅವರ ಕುಟುಂಬದ ಖಾಸಗಿ ವಿಷಯ. ಶೆರಿಯಾ ಕಾನೂನಿನಡಿ ಇದಕ್ಕೆ ಅವಕಾಶವಿದೆ. ಆದರೆ, ಇದಕ್ಕೆ ನಿಮಿಷಾ ಅವರ ಕುಟುಂಬ ಒಪ್ಪಬೇಕಷ್ಟೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ನಿಮಿಷಾ ಪ್ರಿಯಾ ಅವರ ವಕೀಲರು ಮತ್ತು ಅಟಾರ್ನಿ ಜನರಲ್ ಇಬ್ಬರಿಂದಲೂ ವಾದಗಳನ್ನು ಕೇಳಿದ ನಂತರ ಸುಪ್ರೀಂ ಕೋರ್ಟ್ ಜುಲೈ 18ರ ಶುಕ್ರವಾರದಂದು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿತು.
ಆದರೆ, ಮೂಲಗಳು ತಿಳಿಸಿರುವಂತೆ ಒಂದು ವೇಳೆ ಜುಲೈ 16ಕ್ಕೆ ನಿಮಿಷಾ ಪ್ರಿಯಾ ಅವರನ್ನು ನೇಣಿಗೇರಿಸುವುದು ನಿಜವಾದರೆ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆ ವೇಳೆ ಆಕೆ ಬದುಕಿಯೇ ಇರುವುದಿಲ್ಲ.