ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಹೋಗಿದ್ದ ಒಂಬತ್ತು ಮಂದಿ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ.
ಉತ್ತರಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ ಸೋಂಕು ತಗಲಿ ಈ ಒಂಬತ್ತು ಮಂದಿ ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ. ಒಂಬತ್ತು ಜನರಲ್ಲಿ ಕೂಡ ಒಂದು ಕಣ್ಣಿಗೆ ತೊಂದರೆಯಾಗಿದೆ. ಇದರಿಂದ ಆಸ್ಪತ್ರೆಯನ್ನು ಮುಚ್ಚಿ ತನಿಖೆಗೆ ಆದೇಶಿಸಲಾಗಿದೆ. ಉತ್ತರ ಪ್ರದೇಶದ ನ್ಯೂ ರಾಜೇಶ್ ಹೈಟೆಕ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ನ್ಯೂ ರಾಜೇಶ್ ಹೈಟೆಕ್ ಆಸ್ಪತ್ರೆಯಲ್ಲಿ ಫೆಬ್ರವರಿ 1ರಂದು ನೇತ್ರ ಚಿಕಿತ್ಸಾ ಶಿಬಿರ ನಡೆಸಲಾಗಿತ್ತು. ಈ ಶಿಬಿರದಲ್ಲಿ 30 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ 24 ಗಂಟೆಗಳ ಒಳಗೆ ಹಲವಾರು ರೋಗಿಗಳು ತೀವ್ರ ನೋವು ಮತ್ತು ಶಸ್ತ್ರಚಿಕಿತ್ಸೆಯ ಕಣ್ಣಿನಲ್ಲಿ ನೀರು ಸೋರಿಕೆ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು.
ಸುಮಾರು 18 ಮಂದಿಗೆ ಸೋಂಕು ತಗುಲಿದ್ದು ಅವರ ಸ್ಥಿತಿ ಹದಗೆಟ್ಟ ಬಳಿಕ ಅವರನ್ನು ದೆಹಲಿ, ಲಕ್ನೋ ಮತ್ತು ವಾರಣಾಸಿಯ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಒಬ್ಬ ರೋಗಿ ಮಾತ್ರ ಭಾಗಶಃ ದೃಷ್ಟಿಯನ್ನು ಮರಳಿ ಪಡೆದಿದ್ದಾನೆ. ಒಂಬತ್ತು ಮಂದಿ ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ಬ್ಯಾಕ್ಟೀರಿಯಾ ಸೋಂಕು ಇರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ. ಹಲವು ಶಸ್ತ್ರಚಿಕಿತ್ಸೆಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ನಡೆಸಲಾಗಿದ್ದು, ಶಸ್ತ್ರಚಿಕಿತ್ಸೆಯ ಅನಂತರ ಕೆಲವೇ ಗಂಟೆಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಕೆಲವರು ಮರುದಿನ ಬಂದು ತಮಗಾದ ತೊಂದರೆಗಳ ಬಗ್ಗೆ ದೂರು ನೀಡಿದ್ದಾರೆ.



