March 27, 2026
Friday, March 27, 2026
spot_img

21 ವರುಷಗಳ ನಂತರ ದೆಹಲಿ ದಾರಿ ಹಿಡಿದ ನಿತೀಶ್ ಕುಮಾರ್: ಬಿಹಾರದ ಮುಂದಿನ ಸಾರಥಿ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ರಾಜಕಾರಣದಲ್ಲಿ ದಶಕಗಳ ಕಾಲ ಪಾರುಪತ್ಯ ಮೆರೆದಿದ್ದ ನಿತೀಶ್ ಕುಮಾರ್ ಅವರು ಈಗ ರಾಜ್ಯ ರಾಜಕಾರಣದಿಂದ ಕೇಂದ್ರ ರಾಜಕಾರಣಕ್ಕೆ ಮರಳಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ, ಮಾರ್ಚ್ 30ರಂದು ನಿತೀಶ್ ಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಜಯಭೇರಿ ಬಾರಿಸಿದ್ದಾರೆ. ಭಾರತದ ಸಂವಿಧಾನದ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿಯು ಏಕಕಾಲದಲ್ಲಿ ಎರಡು ಸದನಗಳ (ವಿಧಾನಸಭೆ/ಪರಿಷತ್ತು ಮತ್ತು ಸಂಸತ್ತು) ಸದಸ್ಯತ್ವವನ್ನು ಹೊಂದುವಂತಿಲ್ಲ. ರಾಜ್ಯಸಭೆಗೆ ಆಯ್ಕೆಯಾದ 14 ದಿನಗಳ ಒಳಗೆ ಯಾವುದಾದರೂ ಒಂದು ಸ್ಥಾನಕ್ಕೆ ರಾಜೀನಾಮೆ ನೀಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ, ಮಾರ್ಚ್ 30ರ ಗಡುವು ಹತ್ತಿರವಾಗುತ್ತಿದ್ದು, ನಿತೀಶ್ ಕುಮಾರ್ ಮುಖ್ಯಮಂತ್ರಿ ಗಾದಿ ತೊರೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಕುತೂಹಲಕಾರಿ ವಿಷಯವೆಂದರೆ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರ ರಾಜಕೀಯ ಎಂಟ್ರಿ. ಇಲ್ಲಿಯವರೆಗೆ ರಾಜಕೀಯದಿಂದ ದೂರವಿದ್ದ ನಿಶಾಂತ್ ಅವರನ್ನು ಬಿಹಾರದ ನೂತನ ಉಪಮುಖ್ಯಮಂತ್ರಿಯನ್ನಾಗಿ ನೇಮಿಸುವ ಬಗ್ಗೆ ಪಕ್ಷದೊಳಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಈ ಮೂಲಕ ತಮ್ಮ ಉತ್ತರಾಧಿಕಾರಿಯನ್ನು ಬಿಹಾರ ರಾಜಕಾರಣದಲ್ಲಿ ಗಟ್ಟಿಯಾಗಿ ನೆಲೆಯೂರಿಸುವುದು ನಿತೀಶ್ ಅವರ ತಂತ್ರವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !