ಹೊಸದಿಗಂತ ಶಿರಸಿ
ಉತ್ತರ ಕನ್ನಡದ ನೈಸರ್ಗಿಕ ಸಮತೋಲನ ಹಾಗೂ ಸ್ಥಳೀಯರ ಬದುಕನ್ನು ಸಂರಕ್ಷಿಸಲು ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಹೋರಾಟ ಸಮಿತಿ ಆಗ್ರಹಿಸಿದೆ. ಫೆಬ್ರವರಿ 22 ರಂದು ಅಂಕೋಲಾಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಕುರಿತು ಅಧಿಕೃತ ಘೋಷಣೆ ಮಾಡಬೇಕೆಂದು ಒತ್ತಾಯಿಸಲಾಗಿದೆ.
ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಈ ಹಿಂದೆ ಮುಖ್ಯಮಂತ್ರಿಗಳು ನೀಡಿದ್ದ ಮಾತನ್ನು ಈಗ ಉಳಿಸಿಕೊಳ್ಳಬೇಕೆಂದು ಅನಂತ ಅಶೀಸರ ಒತ್ತಾಯಿಸಿದ್ದಾರೆ.
ಪಶ್ಚಿಮ ಘಟ್ಟದ ಸೂಕ್ಷ್ಮ ವಲಯದಲ್ಲಿ ನದಿ ಹರಿವು ಬದಲಿಸುವುದರಿಂದ ಭೂಕುಸಿತ ಸಂಭವಿಸುವ ಅಪಾಯವಿದ್ದು, ರೈತರು ಹಾಗೂ ಮೀನುಗಾರರ ಜೀವನ ದುಸ್ತರವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಲಾಗಿದೆ.
ಈಗಾಗಲೇ ಜಿಲ್ಲೆಯ ನೂರಾರು ಗ್ರಾಮ ಪಂಚಾಯತ್ಗಳು ಹಾಗೂ ಸಹಕಾರಿ ಸಂಸ್ಥೆಗಳು ಯೋಜನೆಯ ವಿರುದ್ಧ ನಿರ್ಣಯ ಅಂಗೀಕರಿಸಿವೆ.
ಹೋರಾಟದ ಮುಂದಿನ ಭಾಗವಾಗಿ ಸಾಣಿಯ ಶಿಲ್ಲಬೈಲ್ ಬಳಿ ಬೃಹತ್ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವರ್ಣವಲ್ಲೀ ಶ್ರೀಗಳ ಸನ್ನಿಧಿಯಲ್ಲಿ ನಡೆಯಲಿರುವ ಈ ಪೂಜೆಯಲ್ಲಿ ಸಾವಿರಾರು ಮಹಿಳೆಯರು ಹಾಗೂ ಕೃಷಿಕರು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ತಿಳಿಸಿದೆ.



