ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಚೀನಾದ ಕ್ವಿಂಗ್ಡಾವೊದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (SCO) ರಕ್ಷಣಾ ಸಚಿವರ ಸಭೆಯಲ್ಲಿ ಜಂಟಿ ಹೇಳಿಕೆಗೆ ಸಹಿ ಹಾಕಲು ಭಾರತ ನಿರಾಕರಿಸಿದೆ.
ಭಾರತದ ಪರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರು. ಆದ್ರೆ ಸಭೆಯಲ್ಲಿ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಜಂಟಿ ಹೇಳಿಕೆಯಲ್ಲಿ ಸೇರಿಸಲಾಗಿಲ್ಲ, ಆದರೆ ಬಲೂಚಿಸ್ತಾನದಲ್ಲಿ ನಡೆದ ಘಟನೆಯನ್ನು ಅದರಲ್ಲಿ ಸೇರಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಭಾರತ ಜಂಟಿ ಹೇಳಿಕೆಗೆ ಸಹಿ ಹಾಕಲು ನಿರಾಕರಿಸಿದೆ.
ಸಭೆಯಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ತಮ್ಮ ನೀತಿಯೆಂದು ಪರಿಗಣಿಸುತ್ತವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತವೆ. ನಂತರ ಅವರು ಅದನ್ನು ನಿರಾಕರಿಸುತ್ತಾರೆ. ಅಂಥ ದ್ವಿಮುಖ ಧೋರಣೆಗೆ ಅವಕಾಶವಿರುವುದಿಲ್ಲ. ಭಯೋತ್ಪಾದನೆಯ ಕೇಂದ್ರಬಿಂದುಗಳು ಇನ್ನು ಸುರಕ್ಷಿತವಲ್ಲ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ಇದೇ ವೇಳೆ SCO ಇಂತಹಗಳನ್ನು ಟೀಕಿಸಲು ಹಿಂಜರಿಯಬಾರದು ಎಂದು ರಾಜನಾಥ್ ಖಡಕ್ ಆಗಿ ಹೇಳಿದ್ದಾರೆ.
ಈ ಸಭೆಯಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಕೂಡ ಉಪಸ್ಥಿತರಿದ್ದರು.
SCO ಎಂದರೇನು?
ಶಾಂಘೈ ಸಹಕಾರ ಸಂಸ್ಥೆ (SCO) 2001 ರಲ್ಲಿ ಚೀನಾ, ರಷ್ಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸ್ಥಾಪಿಸಿದ ಪ್ರಾದೇಶಿಕ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ನಂತರ ಭಾರತ ಮತ್ತು ಪಾಕಿಸ್ತಾನ 2017 ರಲ್ಲಿ ಮತ್ತು ಇರಾನ್ 2023 ರಲ್ಲಿ ಸದಸ್ಯರಾದರು. ಸದಸ್ಯ ರಾಷ್ಟ್ರಗಳ ನಡುವೆ ಭದ್ರತೆ, ಆರ್ಥಿಕ ಮತ್ತು ರಾಜಕೀಯ ಸಹಕಾರವನ್ನು ಹೆಚ್ಚಿಸುವುದು SCO ಯ ಉದ್ದೇಶವಾಗಿದೆ.