ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಈ ಘಟನೆಯ ಬಗ್ಗೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ರೇಣುಕಾ ಸ್ವಾಮಿ ಹತ್ಯೆ ಆಗಿರುವುದು ದುರದೃಷ್ಟಕರ. ಯಾರೂ ಕೂಡ ಕ್ಷಮಿಸಲಾರದ ಹೇಯ ಕೃತ್ಯ. ರೇಣುಕಾ ಸ್ವಾಮಿ ಜೀವ ವಾಪಸ್ ಬರುವುದಿಲ್ಲ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಈ ಕೇಸ್ನಲ್ಲಿ ಯಾರೇ ತಪ್ಪಿತಸ್ಥರಾಗಿರಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕಾನೂನು ಎಲ್ಲವನ್ನೂ ಮೀರಿದ್ದು. ಕಾನೂನಿನ ಪ್ರಕಾರ ತಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.
ದರ್ಶನ್ ಅವರನ್ನು ಬ್ಯಾನ್ ಮಾಡೋಕೆ ಆಗಲ್ಲ ಎಂದು ಈಗಾಗಲೇ ಚಿತ್ರರಂಗದವರು ಹೇಳಿದ್ದಾರೆ. ಅಪರಾಧ ಸಾಬೀತಾಗಬೇಕು. ನಿಷ್ಪಕ್ಷವಾದ, ನ್ಯಾಯಯುತವಾದ ತನಿಖೆ ಆಗಬೇಕು. ಬ್ಯಾನ್ ಮಾಡೋದರಿಂದ ಈಗೇನು ಪ್ರಯೋಜನ ಇದೆ? ಈಗಾಲೇ ಅವರು ಜೈಲಿನಲ್ಲಿದ್ದಾರೆ. ನ್ಯಾಯಾಲಯದಿಂದ ಹೊರಬಂದ ಬಳಿಕ ಈ ವಿಚಾರ ಬರಬೇಕು. ಸದ್ಯಕ್ಕೆ ದರ್ಶನ್ ಆರೋಪಿಯೇ ಹೊರತು ಅಪರಾಧಿ ಅಲ್ಲ. ಅಪರಾಧ ಸಾಬೀತಾದ ಬಳಿಕ ಚಿತ್ರರಂಗ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು ಎಂದಿದ್ದಾರೆ.
ನನಗೆ ದರ್ಶನ್ ಕಲಾವಿದನಾಗಿ, ಸ್ವಲ್ಪ ಮಟ್ಟಿಗೆ ಸ್ನೇಹಿತನಾಗಿ ಗೊತ್ತೇ ಹೊರತು ಅವರ ಸಂಪೂರ್ಣ ವಿವರಗಳು ನನಗೆ ಗೊತ್ತಿಲ್ಲ. ಅವರ ಹತ್ತಿರ ಯಾವೆಲ್ಲ ಜನರು ಇದ್ದರು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೃಷಿ ಮಂತ್ರಿ ಆಗಿದ್ದಾಗ ಅವರನ್ನು ಕೃಷಿ ಇಲಾಖೆಗೆ ಪ್ರಚಾರ ರಾಯಭಾರಿ ಮಾಡಿದ್ದೆವು. ಆಗ ಅವರು ಇಂಥ ಕೃತ್ಯದಲ್ಲಿ ಭಾಗಿ ಆಗಿರಲಿಲ್ಲ. ಜನಪ್ರಿಯ ನಟನನ್ನು ರಾಯಭಾರಿಯನ್ನಾ ಮಾಡಿದರೆ ಅದರಿಂದ ರೈತರಿಂದ ಶಕ್ತಿ ತುಂಬುತ್ತದೆ ಎಂಬುದು ನಮ್ಮ ಉದ್ದೇಶ ಆಗಿತ್ತು ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.