ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಎಂದಿಗೂ ಪ್ರಜಾಪ್ರಭುತ್ವ ರಾಷ್ಟ್ರ. 2500 ವರ್ಷಗಳ ಹಿಂದಿನಿಂದಲೂ ಇಂಥದ್ದೊಂದು ರಾಜಕೀಯ ವ್ಯವಸ್ಥೆ ಭಾರತದಲ್ಲಿದೆ. ಪ್ರಜಾಪ್ರಭುತ್ವದ ನಾಲ್ಕೂ ಕಂಬಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ನಮ್ಮ ನಡುವೆ ಇದೆ. ಇದೇ ಕಾರಣಕ್ಕಾಗಿಯೇ ಇಂದಿಗೂ ಭಾರತ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದುಕೊಂಡಿದೆ..ಇದು ರುಚಿರಾ ಕಂಬೋಜ್ ಅವರು ವಿಶ್ವಸಂಸ್ಥೆಯಲ್ಲಿ ಹೇಳಿದ ಮಾತು.
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದಲ್ಲಿನ ಪ್ರಜಾಪ್ರಭುತ್ವ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಕುರಿತಾಗಿ ಪ್ರಶ್ನೆ ಒಂದು ಎದುರಾಗಿತ್ತು. ಈ ವೇಳೆ ದಿಟ್ಟತನದಿಂದ ಭಾರತದ ಕಾಯಂ ಪ್ರತಿನಿಧಿ ಖಡಕ್ ಆಗಿ ಉತ್ತರ ನೀಡಿದ್ದಾರೆ.
ವಿಶ್ವದ ಯಾವುದೇ ದೇಶ ಕೂಡ ಪ್ರಜಾಪ್ರಭುತ್ವದಲ್ಲಿ ಏನೇನು ಮಾಡಬೇಕು ಎಂದು ಭಾರತಕ್ಕೆ ಪಾಠ ಮಾಡಬೇಕಾದ ಅಗತ್ಯವಿಲ್ಲ ಎಂದು ಈ ಮೂಲಕ ಉತ್ತರಿಸಿದ್ದಾರೆ. .
ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಮುಂದೆ ಮಾತನಾಡಿದ ರುಚಿರಾ ಕಂಬೋಜ್, ಭಾರತದಲ್ಲಿ ಪ್ರತಿ ಐದು ವರ್ಷಕ್ಕೆ ಭಾರತದಲ್ಲಿ ಚುನಾವಣೆ ನಡೆಯುತ್ತದೆ. ಭಾರತದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಎಲ್ಲರೂ, ತಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯ ವಿದೆ . ಪ್ರಸ್ತುತ ದೇಶದಲ್ಲಿ ವ್ಯಾಪಕವಾಗಿ ಅಭಿವೃದ್ಧಿ ಕಾರ್ಯಗಳು ಹಾಗೂ ಬದಲಾವಣೆಗಳು ಆಗುತ್ತಿವೆ. ಇದರ ಫಲಿತಾಂಶಗಳು ಕೂಡ ಆಶಾದಾಯಕವಾಗಿದೆ. ನಮ್ಮ ದೇಶದಲ್ಲಿ ಆಗುತ್ತಿರುವ ಧನಾತ್ಮಕ ಬದಲಾವಣೆಗಳು ಪ್ರಸ್ತುತ ಜಗತ್ತಿಗೆ ಗೊತ್ತಾಗುತ್ತಿದೆ. ಇದ್ಯಾವುದನ್ನು ಈ ವೇದಿಕೆಯಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ಹೇಳುವ ಅಗತ್ಯವಿಲ್ಲ ಎಂದಿದ್ದಾರೆ.
ಪ್ರಸುತ್ತ ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಭಾರತ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಇಡೀ ತಿಂಗಳು ರುಚಿರಾ ಕಂಬೋಜ್ ಅಧ್ಯಕ್ಷ ಸ್ಥಾನದಲ್ಲಿ ಇರಲಿದ್ದಾರೆ. ಅದರೊಂದಿಗೆ ಎರಡು ವರ್ಷಗಳ ಕಾಲ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದ ಶಾಶ್ವತವಲ್ಲದ ಸದಸ್ಯ ಸ್ಥಾನ ಕೂಡ ಕೊನೆಯಾಗಲಿದೆ.