ಹೊಸ ದಿಗಂತ ಡಿಜಿಟಲ್ ಡೆಸ್ಕ್;
ರಾಜ್ಯಸಭೆಯಲ್ಲಿ ಆಪರೇಷನ್ ಸಿಂದೂರ್ ಕುರಿತ ಚರ್ಚೆಯಲ್ಲಿ ಇಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿದ್ದಾರೆ.
ಏಪ್ರಿಲ್ 22 ರಿಂದ ಜೂನ್ 16 ರವರೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ಒಂದೇ ಒಂದು ಫೋನ್ ಕರೆ ಕೂಡ ನಡೆದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಆಪರೇಷನ್ ಸಿಂದೂರ್ ಆರಂಭವಾದಾಗ, ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಮತ್ತು ಇದು ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದನ್ನು ನೋಡಲು ಹಲವಾರು ದೇಶಗಳು ನಮ್ಮನ್ನು ಸಂಪರ್ಕಿಸಿದ್ದವು. ನಾವು ಯಾವುದೇ ಮಧ್ಯಸ್ಥಿಕೆಗೆ ಮುಕ್ತವಾಗಿಲ್ಲ ಎಂದು ಎಲ್ಲಾ ದೇಶಗಳಿಗೆ ಒಂದೇ ಸಂದೇಶವನ್ನು ನೀಡಿದ್ದೇವೆ. ನಮ್ಮ ಮತ್ತು ಪಾಕಿಸ್ತಾನದ ನಡುವಿನ ಯಾವುದೇ ವಿಷಯವು ದ್ವಿಪಕ್ಷೀಯವಾಗಿರುತ್ತದೆ. ನಾವು ಪಾಕಿಸ್ತಾನದ ದಾಳಿಗೆ ಪ್ರತಿಕ್ರಿಯಿಸಿದ್ದೇವೆ, ಮುಂದೆಯೂ ಪ್ರತಿಕ್ರಿಯಿಸುತ್ತಲೇ ಇರುತ್ತೇವೆ. ಆ ಹೋರಾಟ ನಿಲ್ಲಬೇಕಾದರೆ, ಪಾಕಿಸ್ತಾನವು ಡಿಜಿಎಂಒ ಮೂಲಕ ವಿನಂತಿ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದರು.
ಇದರಂತೆ, ಮೇ 10, 2025ರಂದು ಪಾಕಿಸ್ತಾನದ ಡಿಜಿಎಂಒ ಭಾರತದ ಡಿಜಿಎಂಒಗೆ ಕರೆ ಮಾಡಿ, 5:00 PM IST ಯಿಂದ ಎಲ್ಲಾ ಸೈನಿಕ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಿಗೆ ಸೂಚಿಸಿತು. ಈ ಒಪ್ಪಂದವು ಭೂಮಿ, ಗಾಳಿ, ಮತ್ತು ಸಮುದ್ರದಲ್ಲಿ ಎಲ್ಲಾ ದಾಳಿಗಳನ್ನು ನಿಲ್ಲಿಸಿತು.
ನಾವು ಪಾಕಿಸ್ತಾನ ದಾಳಿಗೆ ಪ್ರತಿಕ್ರಿಯೆ ನೀಡಿದ್ದೇವೆ. ಅದು ದಾಳಿ ಮಾಡಿದಾಗಲೆಲ್ಲಾ ನಾವು ಪ್ರತಿಕ್ರಿಯಿಸುತ್ತಲೇ ಇರುತ್ತೇವೆ. ಭಾರತ ಮಧ್ಯಸ್ಥಿಕೆಗೆ ಮುಕ್ತವಾಗಿಲ್ಲ, ನಾವು ಪರಮಾಣು ಬೆದರಿಕೆಯನ್ನು ಒಪ್ಪುವುದಿಲ್ಲ ಎಂಬ ಸಂದೇಶ ನೀಡಿದ್ದೇವೆ ಎಂದರು.
ಭಾರತದ ರಾಜತಾಂತ್ರಿಕತೆಯು ಟಿಆರ್ಎಫ್ ನ್ನು ಭಯೋತ್ಪಾದಕ ಸಂಘಟನೆ ಎಂದು ಅಮೆರಿಕದಿಂದ ಘೋಷಿಸುವಲ್ಲಿ ಯಶಸ್ವಿಯಾಗಿದೆ. ರೆಸಿಸ್ಟೆನ್ಸ್ ಫ್ರಂಟ್ (TRF) ಪಾಕಿಸ್ತಾನ ಮೂಲದ ಎಲ್ಇಟಿಯ ಪ್ರಾಕ್ಸಿ ಎಂದು ನಾವು ಯುಎನ್ ಮಾನ್ಯತೆಯನ್ನು ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.