ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಭಾಷೆಯ ಬಗ್ಗೆ ಅವಹೇಳನ ಮಾತನಾಡಿರುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ನಟಿ ರಚಿತಾ ರಾಮ್ ಕೂಡ , ಕಮಲ್ ಹಾಸನ್ ಹೆಸರು ಹೇಳದೆಯೂ ಅವರ ಬಗ್ಗೆ ಹಾಗೂ ಕನ್ನಡಿಗರಿಗೆ ಎಲ್ಲರಿಗೂ ಇರಲೇಬೇಕಾಗಿರೋ ಕನ್ನಡ ಭಾಷಾಭಿಮಾನದ ಬಗ್ಗೆ ಹೇಳಿದ್ದಾರೆ. ನಮ್ಮ ಭಾಷೆ ಮೇಲೆ ಎಷ್ಟು ಪ್ರೀತಿ ಇದೆ ಅಂತ ಈಗ ನಾವು ಅವರಿಗೆ ತಿಳಿಸೋಣ ಎಂದ ರಚಿತಾ ರಾಮ್.
‘ಕನ್ನಡ ಭಾಷೆ ಅಂತ ಬಂದಾಗ ನಾವೆಲ್ಲರೂ ಒಟ್ಟಾಗಿ ಮಾತನ್ನಾಡಬೇಕಿದೆ. ಕನ್ನಡಿಗರು ನಾವು ತುಂಬಾ ವಿಶಾಲ ಹೃದಯದವರು. ನಾವು ಎಲ್ಲಾ ಭಾಷೆಗಳನ್ನು, ಭಾಷಿಗರನ್ನು ಗೌರವದಿಂದ ಕಾಣುತ್ತೇವೆ. ನಾವು ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುತ್ತೇವೆ, ಹಾಡುಗಳನ್ನೂ ಕೇಳುತ್ತೇವೆ. ಅಷ್ಟೇ ಏಕೆ, ಎಲ್ಲಾ ಭಾಷೆಯ ಕಲಾವಿದರನ್ನೂ ಎನ್ಕರೇಜ್ ಮಾಡ್ತೀವಿ. ಹಾಗೂ, ತಂತ್ರಜ್ಞರನ್ನೂ ಕೂಡ ಒಪ್ಪಿಕೊಳ್ತೀವಿ, ಅಪ್ಪಿಕೊಳ್ತೀವಿ. ಆದ್ರೆ, ನಮ್ಮ ಭಾಷೆಯ ಬಗ್ಗೆ ಯಾರಾದ್ರೂ ಕೆಟ್ಟದಾಗಿ ಮಾತನ್ನಾಡಿದಾಗ, ಟೀಕೆ ಮಾಡಿದಾಗ ನಾವ್ಯಾಕೆ ವೈಸ್ ರೈಸ್ ಮಾಡ್ಬಾರ್ದು? ಹೌದು, ನಾವು ಬೇರೆ ಯಾವುದೇ ಭಾಷೆಯನ್ನೂ ಟೀಕೆ ಮಾಡ್ತಾ ಇಲ್ಲ. ಆದ್ರೆ ನಮ್ಮ ಭಾಷೆಯನ್ನು ಯಾರಾದ್ರೂ ಟೀಕೆ ಮಾಡಿದ್ರೆ ಖಂಡಿತವಾಗಿಯೂ ನಾವು ಸಮ್ನೆ ಕೂರೋದಕ್ಕೆ ಆಗಲ್ಲ. ನಮ್ಮ ಭಾಷೆಯ ಬಗ್ಗೆ ನಮಗೆ ಖಂಡಿತ ಹೆಮ್ಮೆ ಇರಲೇಬೇಕು ಎಂದಿದ್ದಾರೆ.
ತಮ್ಮ ವಿಡಿಯೋದಲ್ಲಿ ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗು ನೀ ಕನ್ನಡವಾಗಿರು..’ ಎಂಬ ಹಾಡಿನ ಮೂಲಕ ವಿಡಿಯೋದಲ್ಲಿ ಮಾತನ್ನಾಡಿದ್ದು, ‘ಕನ್ನಡ ಭಾಷೆ ಅಂತ ಬಂದಾಗ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಹಾಗೇ, ನನಗೆ ನಮ್ಮದೇ ಕನ್ನಡ ಸಿನಿಮಾದ ಇನ್ನೊಂದು ಹಾಡು ನೆನಪಾಗ್ತಿದೆ ಎಂದು ‘ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರೆಲ್ಲಾ ಕೋಣರಲ್ಲ’ ಎಂದಿದ್ದಾರೆ ನಟಿ ರಚಿತಾ ರಾಮ್.