March 24, 2026
Tuesday, March 24, 2026
spot_img

ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಸಿದ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದೆ. ಎಷ್ಟೋ ಮಕ್ಕಳು ಪರೀಕ್ಷೆಗಾಗಿ ತಯಾರಿ ನಡೆಸಿ ಪರೀಕ್ಷೆಗೆಂದೇ ಕಾಯುತ್ತಿದ್ದರೆ ಕೆಲವು ಮಕ್ಕಳಿಗೆ ಪರೀಕ್ಷೆಗಿಂತ ದಿನದ ಊಟಕ್ಕೆ ಬೇಕಾದ ಹಣ ಮುಖ್ಯವಾಗುತ್ತದೆ.

ಬಡತನದಿಂದಾಗಿ ಪರೀಕ್ಷೆ ಬರೆಯದೆ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಎಕ್ಸಾಂ ಬರೆಸಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬರ್ಡೂರು ಗ್ರಾಮದ ವಿದ್ಯಾರ್ಥಿನಿ ಪಲ್ಲವಿ ಹಳ್ಳಿಕೇರಿ ಬಡತನದ ಕಾರಣದಿಂದಾಗಿ ದ್ರಾಕ್ಷಿ ತೋಟದಲ್ಲಿ ದಿನಗೂಲಿ ಮಾಡುತ್ತಿದ್ದಳು. ಪರೀಕ್ಷೆಗೆ ಹೋಗೋ ಮನಸ್ಸಿದ್ದರೂ ಮನೆಯವರು ಹೇಳಿದಂತೆ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿತ್ತು.

ಈಗಾಗಲೇ ವಿಜ್ಞಾನ ವಿಷಯದ ಪರೀಕ್ಷೆ ವೇಳೆ ಪಲ್ಲವಿ ಗೈರು ಹಾಜರಾಗಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು. ಪಲ್ಲವಿ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿಯುತ್ತಿದ್ದಂತೆಯೇ ಅಲ್ಲಿಗೇ ತೆರಳಿ ಪೋಷಕರ ಮನ ಪರಿವರ್ತನೆ ಮಾಡಿ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ.

ನೀವು ಬರದಿದ್ದರೆ ನಾನು ಪರೀಕ್ಷೆ ಬರೆಯುತ್ತಿರಲಿಲ್ಲ, ಇಷ್ಟೆಲ್ಲಾ ಪರಿಶ್ರಮ ಹಾಕಿ ನನ್ನನ್ನು ಕರೆತಂದಿರುವುದಕ್ಕೆ ಧನ್ಯವಾದಗಳು ಎಂದು ಪಲ್ಲವಿ ಹೇಳಿದ್ದಾರೆ. ಈ ನುವೆ ಗದಗ ಜಿಲ್ಲಾ ಶಿಕ್ಷಣಾಧಿಕಾರಿ ಆರ್. ಎಸ್. ಬುರಡಿ ಅವರು ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !