ಹೊಸದಿಗಂತ ವರದಿ, ಚಿತ್ರದುರ್ಗ
ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದೇ ಒಂದು ರಾಷ್ಟ್ರ-ಒಂದು ಚುನಾವಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದರು.
ಚಿತ್ರದುರ್ಗ ನಗರದ ಡಾನ್ ಬಾಸ್ಕೋ ಕಾಲೇಜಿನಲ್ಲಿ ಭಾರತ ಸರ್ಕಾರದ ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ, ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಕಸಿತ ಭಾರತ ಯುವ ಸಂಸತ್ತು – ಯುವಕರ ಭಾಷಣ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಇದೂ ಕೂಡ ಒಂದು. ಈ ಹಿನ್ನೆಲೆಯಲ್ಲಿ ಇದು ಕೇವಲ ಒಂದು ಘೋಷಣೆಯಲ್ಲ. ಬದಲಾಗಿ ೧೪೦ ಕೋಟಿ ಭಾರತೀಯರ ಹೃದಯದ ಬಡಿತ ಎಂದರು.
ದೇಶದಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸುವ, ಪದೇ ಪದೇ ಚುನಾವಣೆಗಳು ನಡೆಯುವುದಕ್ಕೆ ತಡೆ ಒಡ್ಡುವ, ಸಮಯ ಹಾಗೂ ಸಂಪನ್ಮೂಲಗಳನ್ನು ಉಳಿಸುವ ಉದ್ದೇಶ ಈ ಯೋಜನೆಯ ಹಿಂದಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಈಗಾಗಲೇ ಅತ್ಯಂತ ಯಶಸ್ವಿಯಾಗಿ ಚುನಾವಣೆಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಕ್ರಿಯೆ ನಮ್ಮ ದೇಶಕ್ಕೆ ಸವಾಲಾಗಲಾರದು ಎನ್ನುವುದು ನನ್ನ ಅನಿಸಿಕೆಯಾಗಿದೆ ಎಂದು ಹೇಳಿದರು.
ದೇಶದಲ್ಲಿ ದುಡಿಯುವ ಯುವಕರ ಸಂಖ್ಯೆ ಅಂದರೆ ೧೬ ರಿಂದ ೨೪ ನೇ ವಯಸ್ಸಿನ ದುಡಿಯುವ ಯುವಕರ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇಕಡಾ ೬೧ ರಷ್ಟಿದೆ. ಇಡೀ ಪ್ರಪಂಚದಲ್ಲಿಯೇ ಅತಿಹೆಚ್ಚು ದುಡಿಯುವ ಯುವಕರನ್ನು ಹೊಂದಿರುವ ದೇಶ ಭಾರತ. ಈ ಸಂಖ್ಯೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂಬುದು ಮೋದಿಜಿಯವರ ಬಯಕೆಯಾಗಿದೆ. ಈ ಉದ್ದೇಶಕ್ಕಾಗಿಯೇ ಪ್ರತಿಯೊಂದು ಜಿಲ್ಲೆಗಳನ್ನು ಪ್ರಧಾನಮಂತ್ರಿ ಕೌಶಲ್ಯ ಕೇಂದ್ರಗಳನ್ನು ತೆರೆದು ವಿದ್ಯಾವಂತ ನಿರುದ್ಯೋಗಿ ಯುವಕರುಗಳಿಗೆ ಕೌಶಲ್ಯ ತರಬೇತಿ ನೀಡಿ ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸಿಕೊಡುವ ಕೆಲಸವನ್ನು ಮೋದಿಜಿ ಮಾಡಿದ್ದಾರೆ ಎಂದರು.
ಯಾವ ರೀತಿ ಅಮೇರಿಕಾದಲ್ಲಿ ವಿಶ್ವದ ಎಲ್ಲಾ ದೇಶಗಳ ಜನರು ಉದ್ಯೋಗ ಮಾಡುತ್ತಿದ್ದಾರೋ ಅದೇ ರೀತಿ ೨೦೩೦ ರ ವೇಳೆಗೆ ವಿಶ್ವದ ೧೯೫ ದೇಶಗಳಲ್ಲಿಯೂ ಭಾರತದ ಕೌಶಲ್ಯ ಭರಿತ ಯುವಕರು ಕೆಲಸ ಮಾಡುವಂತಾಗಬೇಕು ಎಂಬುದು ಮೋದಿಜಿಯವರ ಕನಸಾಗಿದೆ. ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವುದು ಮೋದಿಜಿ ಕನಸಾಗಿದೆ ಎಂದು ಹೇಳಿದರು.
ಇಂದಿನ ಯುವಕರು ತಮ್ಮ ತಮ್ಮ ಬದುಕನ್ನು ರೂಪಿಸಿಕೊಂಡರೆ ಸಾಲದು. ಯುವಕರು ಈ ದೇಶದ ಅಭಿವೃದ್ದಿಯಲ್ಲಿ ಪಾಲುದಾರರಾಗಬೇಕು. ಭಾರತದ ಭವಿಷ್ಯದ ರಾಯಭಾರಿಗಳಾಬೇಕು. ಹೀಗಾದಾಗ ಮಾತ್ರ ಸಮೃದ್ದ ಭಾರತ ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಧಾನಿಗಳು ೨೦೨೪ರ ಸ್ವಾತಂತ್ರೋತ್ಸವ ಭಾಷಣದಲ್ಲಿ ಈ ದೇಶದ ೧ ಲಕ್ಷ ಯುವಕರನ್ನು ರಾಜಕಾರಣ ಮಾಡಲು ಆಹ್ವಾನಿಸಿದರು. ಯುವಕರು ಹೆಚ್ಚು ಹೆಚ್ಚು ರಾಜಕಾರಣಕ್ಕೆ ಬರಬೇಕು. ಶುದ್ದ ರಾಜಕಾರಣದ ಅವಶ್ಯಕತೆ ಈ ದೇಶಕ್ಕೆ ತುಂಬಾ ಇದೆ ಎಂದು ಹೇಳಿದ್ದರು ಎಂದು ಸಂಸದರು ಸ್ಮರಿಸಿದರು.
ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಿಂದ ಭಾಗವಹಿಸಿದ್ದ ಸುಮಾರು ೨೦೦ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳಲ್ಲಿ ೧೦ ಜನರು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಇವರನ್ನೆಲ್ಲಾ ಅಭಿನಂದಿಸಿದ ಸಂಸದರು, ನಿಮ್ಮ ಪಯಣ ಉಜ್ವಲವಾಗಿರಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಆಯ್ಕೆಯಾದ ೧೦ ಜನ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಹಾಗೂ ಜ್ಯೂರಿಗಳಾಗಿ ಕೆಲಸ ನಿರ್ವಹಿಸಿದವರನ್ನು ಸನ್ಮಾನಿಸಿದರು.
ಸಮಾರಂಭದಲ್ಲಿ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜಪೀರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಾಧುರಿ ಗಿರೀಶ್, ಮದುಗಿರಿ ಅಧ್ಯಕ್ಷ ಹನುಮಂತೇಗೌಡರು, ವಿ.ಎಂ.ಮ್ಯಾಥ್ಯೂ, ಆಡಳಿತಾಧಿಕಾರಿಗಳು, ಡಾನ್ಬಾಸ್ಕೋ ಕಾಲೇಜು, ಸುಹಾಸ್ ನೆಹರು ಯುವ ಕೇಂದ ಚಿತ್ರದುರ್ಗ ಸೇರಿದಂತೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.