ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೊಸ ವಿಷಯವಲ್ಲ. ಇನ್ಮುಂದೆ ಕಾವೇರಿ ನೀರು ಬೇಕು ಎಂದಾದರೆ ಅದನ್ನು ಮೊಬೈಲ್ನಲ್ಲೇ ಬುಕ್ಕಿಂಗ್ ಮಾಡಿಕೊಳ್ಳಬಹುದು.
ನಗರದ ನೀರಿನ ಸಮಸ್ಯೆ ತಪ್ಪಿಸಲು ಮತ್ತು ಟ್ಯಾಂಕರ್ ಮಾಫಿಯಾ ನಿಯಂತ್ರಿಸುವುದಕ್ಕಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ. ಪೈಪ್ಲೈನ್ ಮೂಲಕ ಕಾವೇರಿ ನೀರು ಪೂರೈಕೆ ವ್ಯವಸ್ಥೆ ಇಲ್ಲದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಟ್ಯಾಂಕರ್ ಮಾಫಿಯಾ ತಡೆಯುವುದಕ್ಕಾಗಿ ‘ವೆಬ್ ಆಧಾರಿತ ಮೊಬೈಲ್ ಅಡಾಪ್ಟಿವ್ ಅಪ್ಲಿಕೇಶನ್’ ಆರಂಭಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಆ್ಯಪ್ ಮೂಲಕ ನೀರು ಬುಕಿಂಗ್ ವ್ಯವಸ್ಥೆ ಆರಂಭಿಸಲಾಗುತ್ತಿದ್ದು, ಆ್ಯಪ್ನ ಲಿಂಕ್ ಶೀಘ್ರದಲ್ಲೇ ವೆಬ್ಸೈಟ್ನಲ್ಲಿ ದೊರೆಯಲಿದೆ.
ಮಾರ್ಚ್ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಆ್ಯಪ್ ಮೂಲಕವೇ ನಗರವಾಸಿಗಳು ನೀರಿನ ಟ್ಯಾಂಕರ್ಗಳನ್ನು ಬುಕ್ ಮಾಡಲು ಮತ್ತು ನಿಗದಿತ ಸಮಯದೊಳಗೆ ನೀರು ಪಡೆಯಲು ಪೂರ್ವನಿರ್ಧರಿತ ಶುಲ್ಕವನ್ನು ಪಾವತಿಸಲು ಅವಕಾಶ ಇರಲಿದೆ. ಈ ಯೋಜನೆಯ ಬಹಳ ದೊಡ್ಡ ಪ್ರಯೋಜನವೆಂದರೆ, ಈ ಟ್ಯಾಂಕರ್ಗಳು ಬೋರ್ವೆಲ್ ನೀರನ್ನು ಪೂರೈಸುವುದಿಲ್ಲ. ಬದಲಿಗೆ ಪೈಪ್ ನೀರು ಸರಬರಾಜು ಲಭ್ಯವಿಲ್ಲದ ಪ್ರದೇಶಗಳಲ್ಲಿ ಸ್ಥಾಪಿಸಲಾದ 100-ಕ್ಕೂ ಹೆಚ್ಚು ಕಾವೇರಿ ನೀರಿನ ಸಂಪರ್ಕ ಕೇಂದ್ರಗಳಿಂದ ಕಾವೇರಿ ನೀರನ್ನು ಪೂರೈಸಲಿವೆ.