ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ನಾಳೆ(ಆಗಸ್ಟ್ 17) ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರತಿಭಟನೆಗೆ ಕರೆ ಕೊಟ್ಟಿದೆ. ಐಎಂಎ ಕೊಟ್ಟಿರುವ ಕರೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆ ಗಳ ಒಕ್ಕೂಟ ಮತ್ತು ಹಲವು ವೈದ್ಯಕೀಯ ಅಸೋಸಿಯೇಷನ್ಗಳು ಬೆಂಬಲ ಕೊಟ್ಟಿದ್ದು, ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಆಸ್ಪತ್ರೆ ಓಪಿಡಿ ಬಂದ್ ಆಗಲಿದೆ. ಇದರಿಂದ ಮಕ್ಕಳು, ವಯಸ್ಸಾದವರಿಗೂ ಓಪಿಡಿ ಸೇವೆ ಇರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಿಬೇಕಾಗಿದೆ.
ಬೆಂಗಳೂರಿನಲ್ಲಿ ಇರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಪ್ರತಿಭಟನೆ ಕಾವು ಜೋರಾಗಿ ಇರಲಿದೆ. ಸರ್ಕಾರಿ ವೈದ್ಯರು ಕಪ್ಪುಪಟ್ಟಿ ಧರಿಸಿ ಎಮರ್ಜೆನ್ಸಿ ಸೇವೆಯನ್ನ ಮಾತ್ರ ನೀಡಲಿದ್ದಾರೆ. ಇದರ ಜೊತೆ ಖಾಸಗಿ ವೈದ್ಯರು ಐಎಂಎ ಸಂಘದ ಎದುರು ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಹೀಗಾಗಿ ಶನಿವಾರ(ಆಗಸ್ಟ್ 17) ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ರವರೆಗೆ, ಓಪಿಡಿ ಸೇವೆ ಬಂದ್ ಆಗಲಿದೆ. ಈ ಹಿನ್ನೆಲೆಯಲ್ಲಿ ರೋಗಿಗಳು ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗಲ್ಲ, ಎಮರ್ಜೆನ್ಸಿ ಪೇಷೆಂಟ್ ಗೆ ಮಾತ್ರ ಚಿಕಿತ್ಸೆ ನೀಡಲಿದ್ದಾರೆ.
ಕೇವಲ ಮಲ್ಟಿಸ್ಪೆಷಾಲಿಟಿ, ನರ್ಸಿಂಗ್ ಹೋಂ, ಆಸ್ಪತ್ರೆಗಳು ಮಾತ್ರ ಬಂದ್ ಆಗುತ್ತಿಲ್ಲ, ಇದರ ಜೊತೆಗೆ ಕ್ಲಿನಿಕ್ ವೈದ್ಯರು ಕೂಡಾ ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದು, ನಾಳೆ ಸಣ್ಣ ಪುಟ್ಟ ಖಾಯಿಲೆ ಎಂದು ಕ್ಲಿನಿಕ್ಗೆ ಹೋಗೋಣ ಅಂದ್ಕೊಂಡ್ರೆ ಆ ಸೇವೆ ಕೂಡ ಸಿಗೋದಿಲ್ಲ. ಯಾಕೆಂದ್ರೆ ನಾಳೆ ಕ್ಲಿನಿಕ್ಗಳು ಬಂದ್ ಇರಲಿವೆ. ಇನ್ನೂ ನಾಳಿನ ವೈದ್ಯರ ಪ್ರತಿಭಟನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಪ್ರತಿಭಟನೆ ಉದ್ದೇಶ ಸರಿ ಇದೆ. ಅವರ ಹಕ್ಕನ್ನ ಅವರು ವ್ಯಕ್ತಪಡಿಸಲಿ. ಸಾರ್ವಜನಿಕರಿಗೆ ತೊಂದರೆ ಆಗದೇ ರೀತಿ ಪ್ರತಿಭಟನೆ ಮಾಡಲಿ ಎಂದಿದ್ದಾರೆ.