July 1, 2026
Wednesday, July 1, 2026
spot_img

ವಿಜಯ್ ಸರ್ಕಾರಕ್ಕೆ ‘ಆಪರೇಷನ್’ ಭೀತಿ! 15 ಶಾಸಕರ ರಾಜೀನಾಮೆಗೆ ನಡೆದಿತ್ತಾ ಬಿಗ್ ಪ್ಲಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರ ಅಸ್ತಿತ್ವಕ್ಕೆ ಬಂದ ಕೇವಲ ಎರಡೇ ತಿಂಗಳಲ್ಲಿ ಅದನ್ನು ಉರುಳಿಸುವ ಭಾರಿ ಸಂಚನ್ನು ರಾಜ್ಯ ಗುಪ್ತಚರ ಇಲಾಖೆ ಭೇದಿಸಿದೆ. ಸ್ಪೀಕರ್ ಜೆಸಿಡಿ ಪ್ರಭಾಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ವೇಳೆ ಸರ್ಕಾರದ ವಿರುದ್ಧ ಮತ ಚಲಾಯಿಸಲು ಟಿವಿಕೆ ಶಾಸಕರೊಬ್ಬರಿಗೆ ಭಾರಿ ಆಮಿಷ ಒಡ್ಡಲಾಗಿತ್ತು. 15 ಶಾಸಕರಿಂದ ರಾಜೀನಾಮೆ ಕೊಡಿಸಿ ಸರ್ಕಾರ ಪತನಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

₹35 ಕೋಟಿ ಆಫರ್ ಮತ್ತು ಬೆದರಿಕೆ

ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಕ್ಷೇತ್ರದ ಟಿವಿಕೆ ಶಾಸಕ ಡಾ. ಎನ್. ಇಳಯರಾಜ ಅವರಿಗೆ ‘ಐಪಿಡಿಎಸ್’ ಎಂಬ ರಾಜಕೀಯ ಸಲಹಾ ಸಂಸ್ಥೆಯ ಉದ್ಯೋಗಿ ತಿರುನಾವಕ್ಕರಸು ಎಂಬಾತ ಕರೆ ಮಾಡಿ, ಸರ್ಕಾರದ ವಿರುದ್ಧ ವೋಟ್ ಮಾಡಲು ಬರೋಬ್ಬರಿ 35 ಕೋಟಿ ರೂ. ಆಫರ್ ನೀಡಿದ್ದನು. ಶಾಸಕರು ಈ ಆಫರ್ ತಿರಸ್ಕರಿಸಿದಾಗ, ಅವರಿಗೆ ಹಾಗೂ ಅವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಲಾಗಿತ್ತು. ಈ ಕುರಿತು ಜೂನ್ 29 ರಂದು ಶಾಸಕರು ನೀಡಿದ ದೂರಿನ ಆಧಾರದ ಮೇಲೆ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಜಿ ಸಚಿವ ಸೆಂಥಿಲ್ ಬಾಲಾಜಿ ಕೈವಾಡ?

ಈ ಇಡೀ ಹಗರಣದ ಹಿಂದೆ ಆಡಳಿತಾರೂಢ ಡಿಎಂಕೆ ಪಕ್ಷದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ವಿ. ಅಶೋಕ್ ಕುಮಾರ್ ಕೈವಾಡ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಪೊಲೀಸರು ತಿರುನಾವಕ್ಕರಸು, ನರೇಶ್ ಮತ್ತು ತ್ಯಾಗರಾಜನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !