ಹೊಸದಿಗಂತ ವರದಿ ಹುಬ್ಬಳ್ಳಿ:
ವಿಶ್ವವೇ ಯುದ್ಧದ ಬಿಕ್ಕಟ್ಟು ಎದುರಿಸುತ್ತಿದೆ. ದೇಶದಲ್ಲಿ ಉತ್ತಮವಾದ ರಾಜತಾಂತ್ರಿಕತೆ, ವಿದೇಶಾಂಗ ನೀತಿಯಿಂದ ಭಾರತದಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಲ್ಪಿಜಿ ಅಭಾವದ ಬಗ್ಗೆ ವಿರೋಧ ಪಕ್ಷಗಳು ಜನರಲ್ಲಿ ಆತಂಕ ಸೃಷ್ಟಿಸಿ, ದಾರಿತಪ್ಪಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎಲ್ಪಿಜಿ, ಕೆರೋಸಿಯನ್, ಎ-ಟಿಎ, ಪೆಟ್ರೋಲ್ ಡೀಸೆಲ್ ಅಭಾವವಿಲ್ಲ. ನಾವು ಸಾಕಷ್ಟು ಶೇಖರಣೆ ಮಾಡಿದ್ದೇವೆ. ವಿದೇಶದಲ್ಲಿ ಏನಾಗುತ್ತಿದೆ ಎಂಬುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಎಲ್ಪಿಜಿ ಅಭಾವ ದೇಶದಲ್ಲಿ ಎಲ್ಲಿಯೂ ಆಗಿಲ್ಲ. ವಿರೋಧ ಪಕ್ಷದವರು ಆತಂಕ ಸೃಷ್ಟಿಸುತ್ತಿದ್ದು, ಇದರಿಂದ ಜನರು ಗ್ಯಾಸ್ ಸಿಲಿಂಡರ್ಗಳ ಹೆಚ್ಚು ಬುಕ್ ಮಾಡುತ್ತಿದ್ದಾರೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಹೆಚ್ಚು ಬುಕ್ ಆಗಿದ್ದು, ಸೀಮಿತವಾಗಿ ನೀಡಲು ಸೂಚಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ಭಾರತ ಸುರಕ್ಷಿತವಾಗಿದೆ. ಇದು ಹೆಮ್ಮೆಯ ಸಂಗತಿ. ಬಿಕ್ಕಟ್ಟಿನ ಸಮಯದಲ್ಲಿ ವಿರೋಧ ಪಕ್ಷದವರು ಸಹಕಾರ ನೀಡಬೇಕು. ಆದರೆ ರಾಹುಲ್ ಗಾಂಧಿಯವರು ಅಧಿವೇಶದಲ್ಲಿ ಎಲ್ಪಿಜಿ ಬಗ್ಗೆ ಮಾತನಾಡಿ ಓಡಿ ಹೋದರು. ಇದು ಬೇಜವಾಬ್ದಾರಿ ನಡೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದೆ. ಇವರು ರಾಜಕೀಯ ದುರುದ್ದೇಶದಿಂದ ಜನರು ಆತಂಕಗೊಂಡು ಬುಕ್ಕಿಂಗ್ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಉತ್ತಮವಾಗಿ ನಿರ್ವಹಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡುವಂತೆ ಹೇಳಿಕೆ ನೀಡಿದ್ದಾರೆ. ಇದು ನೈತಿಕ ಅದಪತನದ ಪರಾಕಾಷ್ಠೆ ಹಾಗೂ ಬೇಜವಾಬ್ದಾರಿ ಹೇಳಿಕೆ ಯಾಗಿದೆ ಎಂದು ಹರಿಹಾಯ್ದರು.
ಇದನ್ನೂ ಓದಿ:
ದೇಶದಲ್ಲಿ ಕೆರೋಸಿಯನ್ ಶೇಖರಣೆ ಹೆಚ್ಚಿಸಲಾಗಿದೆ. ಸದ್ಯ 33 ಕೋಟಿ ಎಲ್ಪಿಜಿ ಸಂಪರ್ಕ ಮಾಡಲಾಗಿದೆ. ಪ್ರಮುಖ ದೇಶಗಳಲ್ಲಿ ಪೆಟಲ್ ಹಾಗೂ ಡೀಸೆಲ್ ಅಭಾವ ಎದುರಾಗಿದ್ದು, ಭಾರತದಲ್ಲಿ ಎಲ್ಲಿಯೂ ಆಗಿಲ್ಲ. ಇರಾನನಿಂದಲೂ 2-3 ಶೀಪ್ಗಳು ಭಾರತಕ್ಕೆ ಬಂದಿವೆ. ಆಸ್ಟ್ರೇಲಿಯಾ, ಆಫ್ರಿಕಾ, ಕೆನಡಾ, ರಷ್ಯಾದಿಂದ ಗ್ಯಾಸ್ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಸಿಲಿಂಡರ್ ಅಭಾವದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು, ಪೆಟ್ರೋಲ, ಡಿಸೇಲ್ ದರ ಹೆಚ್ಚಿಸಿ ಜನರಿಗೆ ಹೊರೆಯಾಗುವಂತೆ ಮಾಡಿದ್ದಾರೆ. ವಿಶ್ವದಲ್ಲಿ ಏನಾದರೂ ಸಹ ಮೋದಿ ಕಾರಣ ಎಂದು ಆರೋಪ ಮಾಡುತ್ತಾರೆ. ಇದು ಬೇಜವಾಬ್ದಾರಿ ಹೇಳಿಕೆಗಳು. ದೇಶದಲ್ಲಿ ಎಲ್ಲವೂ ಸರಿಯಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.



