ಹೊಸ ದಿಗಂತ ವರದಿ,ಪುತ್ತೂರು:
ಹಿಂದೆ ಎಂದೂ ಕಂಡು ಕೇಳರಿಯದ ಅಗೌರವ ಪ್ರವೃತ್ತಿಯನ್ನು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮಿತ್ರಪಕ್ಷಗಳು ಈ ಬಾರಿ ಲೋಕಸಭೆಯಲ್ಲಿ ತೋರ್ಪಡಿಸಿದ್ದು, ಸದನದ ಬಾವಿಗಿಳಿದು ಕಾಗದಗಳನ್ನು ಎಸೆಯುವ ಇನ್ನಿತರ ಚೇಷ್ಟೆಗಳನ್ನು ಮಾಡಿದೆ ಎಂದು ನವದೆಹಲಿ ಸಂಸದೆ, ಬಿಜೆಪಿ ಮುಖಂಡೆ ಬಾನ್ಸುರಿ ಸ್ವರಾಜ್ ಆರೋಪಿಸಿದ್ದಾರೆ.
ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ್ ಸಂವಾದದಲ್ಲಿ ಅವರು ಕಾಂಗ್ರೆಸ್ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆದಿವಾಸಿ ಸಮುದಾಯದಿಂದ ಬಂದ ರಾಷ್ಟ್ರಪತಿಗಳ ಬಗ್ಗೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳಿಗೆ ಗೌರವವಿಲ್ಲ, ದಲಿತ ಸ್ಪೀಕರ್ ಮೇಲೆ ಗೌರವವಿಲ್ಲ. ವಿಪಕ್ಷಗಳಿಗೆ ಲೋಕಸಭೆಯಲ್ಲಿ ರಚನಾತ್ಮಕ ಚರ್ಚೆಯ ಅಗತ್ಯವಿಲ್ಲ, ನಿಯಮಗಳನ್ನು ಗಾಳಿಗೆ ತೂರುವ, ಲೋಕಸಭಾಧ್ಯಕ್ಷರ ರೂಲಿಂಗ್ಗೆ ವಿರುದ್ಧವಾಗಿ ನಡೆದುಕೊಳ್ಳುವ ಕಾರ್ಯವನ್ನು ಮಾಡುತ್ತಿವೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳನ್ನು ಮತದಾರ ತಿರಸ್ಕರಿಸಿದ್ದಾನೆ. ವಿಪಕ್ಷಗಳಿಗೆ ವಿಕಸಿತ ಭಾರತದ ದೂರದೃಷ್ಟಿಯ ಬಗ್ಗೆ ಅರಿವಿಲ್ಲ, ಆದರೆ ದೇಶದ ಜನ ಮಾತ್ರ ವಿಕಸಿತ ಭಾರತ ನಿರ್ಮಾಣಕ್ಕೆ ಸಿದ್ಧರಾಗಿದ್ದಾರೆ ಎಂದರು.
ವಿಪಕ್ಷಗಳು ಮದುವೆ ಮನೆಯಲ್ಲಿ ಕಂಡುಬರುವ ಮಾವನ ರೀತಿಯಲ್ಲಿ ವರ್ತಿಸುತ್ತಿದ್ದು, ಎಲ್ಲದಕ್ಕೂ ತಮ್ಮ ವಿರೋಧ ವ್ಯಕ್ತಪಡಿಸುತ್ತಿದೆ. ರಾಹುಲ್ ಗಾಂಧಿ ತನ್ನ ನೇತೃತ್ವದಲ್ಲಿ ನಡೆದ ೯೫ ಚುನಾವಣೆಗಳನ್ನು ಈಗಾಗಲೇ ಸೋತಿದ್ದಾರೆ. ಸಭ್ಯತೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬೆನ್ನೆಲುಬು ಅನ್ನೋದನ್ನ ವಿಪಕ್ಷಗಳು ಇನ್ನಾದರೂ ಅರ್ಥಮಾಡಿಕೊಳ್ಳಬೇಕೆಂದು ಅವರು ಆಗ್ರಹಿಸಿದರು.



