ದಿಗಂತ ವರದಿ ಮಡಿಕೇರಿ:
ತಲಕಾವೇರಿ-ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಶಾಸಕರ ಶಿಫಾರಸ್ಸಿನ ಆಧಾರದಲ್ಲಿ ನೇಮಕಾತಿ ಮಾಡಿರುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಜಿಲ್ಲಾ ಧಾರ್ಮಿಕ ಪರಿಷತ್ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಮೂಲಕ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಬೇಕೆಂಬ ನಿಯಮವಿದೆ.
ಆದರೆ, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ವ್ಯವಸ್ಥಾಪನಾ ಸಮಿತಿಗೆ ಶಿಫಾರಸ್ಸು ಮಾಡಿದವರನ್ನು ಸರ್ಕಾರ ನೇಮಕ ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ 77 ಜನರ ಪರವಾಗಿ ಕೊಕ್ಕಲೇರ ಶ್ಯಾಮ್ ತಿಮ್ಮಯ್ಯ, ಶಾಂತೆಯಂಡ ನಿರನ್ ನಾಚ್ಚಪ್ಪ, ಮಲ್ಲೇಂಗಡ ಸೋಮಣ್ಣ ಅವರುಗಳು ಹಿರಿಯ ಹೈಕೋರ್ಟ್ ವಕೀಲರಾದ ಪವನ್ ಚಂದ್ರಶೆಟ್ಟಿ ಅವರ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ಅವರು, ನ್ಯಾಯಾಲಯದ ಮುಂದಿನ ಆದೇಶದವರೆಗೂ ಪ್ರಸ್ತುತ ಆಗಿರುವ ನೇಮಕಾತಿಗೆ ತಡೆಯಾಜ್ಞೆ ನೀಡಿದ್ದಾರೆ.