ಹೊಸದಿಗಂತ ವರದಿ,ಕಲಬುರಗಿ:
ಮನುಷ್ಯರಿಂದ ಮಾನವರಾಗುವತ್ತ ನಮ್ಮ ಗುರಿ ಇರಬೇಕು. ಮನುಷ್ಯರಿಂದ ಮಾನವರಾಗುವತ್ತ ನಮ್ಮ ಪಯಣಕ್ಕೆ ವೀರಶೈವ ಧರ್ಮ, ಸಂಸ್ಕೃತಿ, ಸಂಸ್ಕಾರ, ಗುರುಗಳ ಆಶೀರ್ವಾದ, ಮಾರ್ಗದರ್ಶನ ಸದಾಕಾಲ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ನಗರದ ವೀರಶೈವ ಕಲ್ಯಾಣ ಮಂಟಪದ ಎದುರಿಗೆ ಭವ್ಯವಾದ ವೇದಿಕೆಯಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ , ಯುಗಮಾನೋತ್ಸವ ಜಿಲ್ಲಾ ಸಮಿತಿ ಕಲಬುರಗಿ ಹಾಗೂ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆಯನ್ನು ಘೋಷಿಸಿದಕ್ಕಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ರಾಜ್ಯ ಸರ್ಕಾರ ಕ್ಕೆ ಸಲ್ಲಿಸಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಆದಿ ರೇಣುಕಾಚಾರ್ಯರ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಇದೆ. ಅದೇ ನಮ್ಮ ಹೆಮ್ಮೆ. ನಿಮ್ಮೆಲ್ಲರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ. ನಾವು ಮಾಡುವ ಕೆಲಸ ದೊಡ್ಡದಲ್ಲ. ಅದನ್ನು ಆಚರಣೆಗೆ ತರುವಲ್ಲಿ ತಮ್ಮೆಲ್ಲರ ಕರ್ತವ್ಯಪ್ರಜ್ಞೆ ದೊಡ್ಡದು ಎಂದರು. ಸಮಾಜದ ಏಳಿಗೆಗೆ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರೂ ನಮಗೆ ಇದನ್ನೇ ಹೇಳಿಕೊಟ್ಟಿದ್ದಾರೆ ಎಂದರು.
ಹುಟ್ಟು ಮತ್ತು ಸಾವಿನಲ್ಲಿ ನಾವು ಸಮಾನರು
ವೀರಶೈವ ಧರ್ಮಕ್ಕೆ ಮಾರ್ಗದರ್ಶನ ಅಗತ್ಯವಿದ್ದಾಗ ಹಾಗೂ ಈ ಸಮಾಜವನ್ನು ಮುನ್ನಡೆಸುವ ಸಂದರ್ಭಗಳಲ್ಲಿ, ಪರಮಪೂಜ್ಯ 1008 ಡಾ: ಪ್ರಸನ್ನ ವೀರಮಹಾಸ್ವಾವಿಗಳ ಪ್ರಾಂಜಲ ಮನಸ್ಸಿನಿಂದ ನೀಡಿರುವ ಕೃಪಾಶೀರ್ವಾದ ನಿರಂತರವಾಗಿ ನಮಗೆ ರಕ್ಷಾಕವಚವಾಗಿದೆ. ಆದಿಗುರು ರೇಣುಕಾರ್ಚಾಯರು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಮಾತನ್ನು ನಮಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ 1008 ಜಗದ್ಗುರು ಡಾ.ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಬಾಳೆ ಹೊನ್ನೂರು ಹಾಗೂ ಅ.ಭಾ.ವಿ.ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪಾ ಮಾತನಾಡಿದರು. ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.