ಹೊಸದಿಗಂತ ವರದಿ ಹಾಸನ :
ಹಾಸನ ಜಿಲ್ಲೆಯ ಹಲವೆಡೆ ವರಣುನ ಅಬ್ಬರ ಜೋರಾಗಿದ್ದು, ಭಾರಿ ಮಳೆಯ ಆರ್ಭಟಕ್ಕೆ ಅನೇಕ ಆವಾಂತರಗಳು ಸಹ ಹಾಗೇ ಮುಂದುವರೆದಿದೆ.
ಅರಕಲಗೂಡು ತಾಲ್ಲೂಕಿನ, ಬೀಜಘಟ್ಟ ಗ್ರಾಮದಲ್ಲಿ ಧಾರಾಕಾರ ಮಳೆಗೆ ಕಟಾವಿಗೆ ಬಂದಿದ್ದ ಭತ್ತದ ಗದ್ದೆ ಜಲಾವೃತಗೊಂಡಿದೆ. ಗದ್ದೆಯಲ್ಲಿ ಮಂಡಿಯುದ್ದ ತುಂಬಿರುವ ನೀರಿನಲ್ಲೇ ಕಟಾವು ಮಾಡುತ್ತಿದ್ದು ಭತ್ತದ ಬೆಳೆಯನ್ನು ಉಳಿಸಿಕೊಳ್ಳಲು ಅನ್ನದಾತನ ಪರದಾಟ ನಡೆಸುತ್ತಿದ್ದಾರೆ. ರೈತ ಸುದರ್ಶನ್ಗೌಡ ಎಂಬುವವರ ಸೇರಿದ ಭತ್ತದ ಗದ್ದೆ
ಭತ್ತ ಕಟಾವು ಮಾಡುವಷ್ಟರಲ್ಲಿ ಪೂರ್ವ ಮುಂಗಾರು ಆರಂಭವಾಗಿದೆ. ಕಳೆದ ಐದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಗದ್ದೆಗೆ ಸಂಪೂರ್ಣ ನುಗ್ಗಿದ ನೀರಿನಿಂದ ಸಂಪೂರ್ಣ ಗದ್ದೆ ಜಲಾವೃತಗೊಂಡಿದೆ.
ಎರಡು ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದ ರೈತ ಸುದರ್ಶನ್ಗೌಡ ನೀರಿನಲ್ಲಿಯೇ ಒಂದು ಎಕರೆ ಪ್ರದೇಶದಷ್ಟು ಭತ್ತ ಕಟಾವು ಮಾಡಿ ಗದ್ದೆ ಬದಿಗೆ ಹಾಕಿದ್ದಾರೆ. ಮಳೆಯಿಂದ ಭತ್ತ ಸಾಗಿಸಲಾಗದೆ ಪರದಾಡುತ್ತಿದ್ದು, ಮಳೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಭತ್ತದ ಬೆಳೆ ನಾಶವಾಗುವ ಆತಂಕ ಇದೀಗ ರೈತ ಕುಟುಂಬ ಎದುರಾಗಿದೆ.