ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹಲವು ಭಾಗಗಳಲ್ಲಿ ಸ್ಫೋಟಕ್ಕೆ ಪ್ಲಾನ್ ಮಾಡಿದ್ದ ಐವರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಸ್ಪೋಟಕ ಮಾಹಿತಿಗಳು ಹೊರಬರುತ್ತಿದ್ದು, ಶಂಕಿತ ಉಗ್ರರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ತರಬೇತಿ ಸಿಗುತ್ತಿತ್ತು ಎನ್ನುವ ವಿಷಯ ಬಹಿರಂಗವಾಗಿದೆ. ಆರೋಪಿಯಾದ ಅಬ್ದುಲ್ ನಸೀರ್ ಮದಾನಿ 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ. ಇನ್ನು ಬ್ಲಾಸ್ಟ್ನ ಮಾಸ್ಟರ್ ಮೈಂಡ್ ಜುನೇದ್ ಕೊಲೆ, ರಕ್ತಚಂದನ ಸಾಗಣೆ ಹಾಗೂ ಡಯಾಯಿತಿ ಪ್ರಕರಣದಲ್ಲಿ 18 ತಿಂಗಳು ಜೈಲು ಶಿಕ್ಷೆ ಅನುಭವಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅಬ್ದುಲ್ ನಸೀರ್ ಬಳಿ ಶಂಕಿತ ಉಗ್ರರು ತರಬೇತಿ ಪಡೆದಿದ್ದಾರೆ, ನಸೀರ್ ಬಳಿ ಸಂಪರ್ಕ ಸಾಧಿಸಿ ಸಂಚು ರೂಪಿಸಿ ಪ್ಲಾನ್ ಮಾಡಿದ್ದರು. ಇದೀಗ ಜುನೇದ್ ವಿದೇಶದಲ್ಲಿದ್ದುಕೊಂಡೇ ಬೆಂಗಳೂರಿನಲ್ಲಿದ್ದ ಶಂಕಿತ ಉಗ್ರರಿಗೆ ನೆರವು ನೀಡಿದ್ದಾನೆ ಎನ್ನುವ ಮಾಹಿತಿ ತಿಳಿದುಬಂದಿದೆ.