ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ (Cross Voting) ಮೈತ್ರಿಕೂಟದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ದ್ರೋಹದ ನಡೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ತೀವ್ರ ಆಕ್ರೋಶ ಹೊರಹಾಕಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಗಂಭೀರ ಚರ್ಚೆ ನಡೆಸಿದ್ದಾರೆ.
ಜೆಡಿಎಸ್ ಶಾಸಕರ ನಡೆಗೆ ಅಮಿತ್ ಶಾ ಪ್ರಶ್ನೆ
ಜೆಡಿಎಸ್ ಅಭ್ಯರ್ಥಿಗೆ ಮತ ಹಾಕದೇ ದ್ರೋಹ ಬಗೆದಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಶಾ ಎಚ್ಚರಿಸಿದ್ದಾರೆ. “ನಮ್ಮ ಪಕ್ಷದ ಕ್ರಾಸ್ ವೋಟರ್ಸ್ ಪತ್ತೆಗೆ ರಾಜ್ಯ ಬಿಜೆಪಿ ನಾಯಕರಿಗೆ ಈಗಾಗಲೇ ಸೂಚಿಸಿದ್ದೇನೆ. ಆದರೆ, ನಿಮ್ಮದೇ ಪಕ್ಷದ ಶಾಸಕರ ಮೇಲೆ ನೀವು ಯಾಕೆ ನಿಗಾ ಇಟ್ಟಿರಲಿಲ್ಲ? ಇಂತಹ ಪರಿಸ್ಥಿತಿ ಬರುವವರೆಗೂ ಯಾಕೆ ಸುಮ್ಮನಿದ್ದಿರಿ?” ಎಂದು ಕುಮಾರಸ್ವಾಮಿ ಅವರನ್ನು ನೇರವಾಗಿಯೇ ಪ್ರಶ್ನಿಸಿದ್ದಾರೆ.
ಅಡ್ಡ ಮತದಾರರ ಪತ್ತೆಗೆ ವಿಶೇಷ ತಂತ್ರ
ಬಿಜೆಪಿಯಿಂದ ಅಡ್ಡ ಮತದಾನ ಮಾಡಿದವರನ್ನು ಪತ್ತೆಹಚ್ಚಲು ಹಲವು ಪ್ರತ್ಯೇಕ ದಾರಿಗಳಿದ್ದು, ಶೀಘ್ರದಲ್ಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. ಇದೇ ವೇಳೆ, ಜೆಡಿಎಸ್ನಲ್ಲೂ ಇರುವ ಅಸಮಾಧಾನಿತ ಹಾಗೂ ದ್ರೋಹ ಬಗೆದ ಶಾಸಕರನ್ನು ಆದಷ್ಟು ಬೇಗ ಪತ್ತೆಹಚ್ಚುವಂತೆ ಹೆಚ್ಡಿಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಫೋನ್ ಕರೆ ಮೈತ್ರಿ ನಾಯಕರಲ್ಲಿ ಮತ್ತಷ್ಟು ನಡುಕ ಹುಟ್ಟಿಸಿದೆ.



