ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿರುವ ಘಟನೆಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ ಪೂರ್ವಯೋಜಿತ ದಾಳಿ ಎಂದು ಹೇಳಿರುವ ಅವರು, ಇದು ಕೇವಲ ವೈಯಕ್ತಿಕ ದ್ವೇಷದ ಕೃತ್ಯವಲ್ಲ, ರಾಜಕೀಯ ಕಾರಣಗಳಿಂದ ನಡೆದ ಸಂಚು ಎಂದು ಆರೋಪಿಸಿದ್ದಾರೆ.
ಮೃತದೇಹವನ್ನು ಆಸ್ಪತ್ರೆಯಿಂದ ನಿವಾಸಕ್ಕೆ ಸಾಗಿಸುವ ವೇಳೆ ಮಾತನಾಡಿದ ಸುವೇಂದು, ರಥ್ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದುದೇ ಅವರ ಏಕೈಕ ‘ತಪ್ಪು’ ಎಂದು ಹೇಳಿದ್ದಾರೆ. ಭವಾನಿಪುರ ಚುನಾವಣೆಯ ರಾಜಕೀಯ ಬೆಳವಣಿಗೆಗಳ ಬಳಿಕ ಅವರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗಿದೆ ಎಂದು ದೂರಿದ್ದಾರೆ. ಹಲವು ದಿನಗಳ ಕಾಲ ಹಿಂಬಾಲಿಸಿ, ಸಂಚು ರೂಪಿಸಿ ಈ ದಾಳಿ ನಡೆಸಲಾಗಿದೆ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಮರಣೋತ್ತರ ಪರೀಕ್ಷೆಯಲ್ಲಿ ಚಂದ್ರನಾಥ್ ರಥ್ ಮೇಲೆ ಸಮೀಪದಿಂದ ನಾಲ್ಕು ಗುಂಡು ಹಾರಿಸಿರುವುದು ಬೆಳಕಿಗೆ ಬಂದಿದೆ. ಇದರಿಂದ ಹತ್ಯೆ ಎಷ್ಟು ಸಂಚುನಿಷ್ಠವಾಗಿ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಸುವೇಂದು ಹೇಳಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಕುಟುಂಬವೂ ಆಗ್ರಹಿಸಿದೆ.
ಈ ಪ್ರಕರಣ ಸಾಮಾನ್ಯ ಕೊಲೆ ಅಲ್ಲ, ಸುಪಾರಿ ಪಡೆದು ನಡೆಸಿದ ಸಂಚು ಎಂದು ಬಿಜೆಪಿ ಆರೋಪಿಸಿದ್ದು, ಮತ್ತೊಂದೆಡೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಗಳು ಕೇಳಿಬರುತ್ತಿವೆ. ಮಾಜಿ ವಾಯುಪಡೆ ಸಿಬ್ಬಂದಿಯಾಗಿದ್ದ ರಥ್ ನಿಧನ ಬಂಗಾಳ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.



