ಹೊಸದಿಗಂತ ವರದಿ,ಮಡಿಕೇರಿ:
ಚುನಾವಣೆ ಸಂದರ್ಭ ‘ಗ್ಯಾರಂಟಿ’ಯಲ್ಲಿ ಹತ್ತು ಕೆ.ಜಿ.ಅಕ್ಕಿ ನೀಡುವುದಾಗಿ ಘೋಷಿಸಿರುವ ನೀವು ಈಗ ಐದು ಕೆ.ಜಿ.ಯ ಬಗ್ಗೆ ಮಾತ್ರ ಮಾತನಾಡುತ್ತಿರುವುದೇಕೆ ಎಂದು ಪ್ರಶ್ನಿಸಿರುವ ಸಂಸದ ಪ್ರತಾಪ್ ಸಿಂಹ, ಹಿಂದೆ ನುಡಿದಂತೆ 10ಕೆ.ಜಿ.ಯ ಹಣವನ್ನು ನೀಡುವ ಮೂಲಕ ಆತ್ಮ ಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲಹೆ ಮಾಡಿದ್ದಾರೆ.
ಮಡಿಕೇರಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಲ್ಲಿ 5ಕೆ.ಜಿ.ಅಕ್ಕಿಯನ್ನು ಕೇಂದ್ರ ಸರಕಾರ ನೀಡುತ್ತಿದ್ದು, ಉಳಿದ ಐದು ಕೆ.ಜಿ.ಗೆ ಮಾತ್ರ ಹಣ ನೀಡುವ ರಾಜ್ಯ ಸರಕಾರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದರು.
ನೀವು ಗ್ಯಾರಂಟಿಯಲ್ಲಿ ಘೋಷಿಸಿದಂತೆ 10 ಕೆ.ಜಿ.ಅಕ್ಕಿ ಅಥವಾ ಕೆ.ಜಿ.ಗೆ ತಲಾ 34ರೂ.ನಂತೆ ಹಣ ಕೊಡಿ. ಗ್ಯಾರಂಟಿ ಘೋಷಿಸುವಾಗ ನೀವು ಕೇಂದ್ರ ಸರಕಾರ ನೀಡುವ 5ಕೆ.ಜಿಯನ್ನು ಸೇರಿಸಿ ಹೇಳಿದ್ದೀರಾ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ಮೋದಿ ನೇತೃತ್ವದ ಕೇಂದ್ರ ಸರಕಾರ ಕೊಡುತ್ತಿರುವ ಅಕ್ಕಿಗೆ ಅನ್ನಭಾಗ್ಯದ ಲೇಬಲ್ ಹಾಕಿದ್ದ ನೀವು ಇದೀಗ ಸತ್ಯ ಒಪ್ಪಿಕೊಂಡಿದ್ದಕ್ಕೆ ಅಭಿನಂದನೆಗಳು ಎಂದು ಅವರು ಹೇಳಿದರು.
ಅಂತ್ಯೋದಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ವಾಜಪೇಯಿ ಅವರು. ಅದು ನಿಮ್ಮ ಕಾಂಗ್ರೆಸ್ ಸರ್ಕಾರದ ಕೊಡುಗೆ ಅಲ್ಲ ಎಂದೂ ಪ್ರತಾಪ್ ಸಿಂಹ ಕುಟುಕಿದರು.
ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರದ ನಡೆಗೆ ಕಿಡಿಕಾರಿದ ಸಂಸದ ಪ್ರತಾಪ್ ಸಿಂಹ, ನಮ್ಮನ್ನು 40 ಪರ್ಸೆಂಟ್ ಸರ್ಕಾರ ಅಂತ ತಮಟೆ ಹೊಡೆದುಕೊಂಡು ಬಂದಿದ್ದೀರಿ. ಈಗ ನಿಮ್ಮದೇನು ಪೋಸ್ಟಿಂಗ್ ಸರಕಾರವೇ ಎಂದೂ ಲೇವಡಿ ಮಾಡಿದರು.