ಹೊಸದಿಗಂತ ವಿಜಯಪುರ:
ಜಿಲ್ಲೆಯ ಭೀಮಾತೀರದ ಚಡಚಣ ಹತ್ತಿರದ ಮರಗೂರ ಬಳಿ ಅಪರೂಪದ ಉಪಕರಣ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.
ನೀಲಾಕಾಶದಿಂದ ಹಾರಿ ಬಂದ ಈ ಉಪಕರಣ ಕೆಲ ಹೊತ್ತು ಗ್ರಾಮಸ್ಥರ ಆತಂಕಕ್ಕೆ ಎಡೆಮಾಡಿತ್ತು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಅದರ ಮಾಹಿತಿ ಕಲೆ ಹಾಕಿ ಜನರ ಆತಂಕ ನಿವಾರಿಸಿದ್ದಾರೆ.
ಈ ಉಪಕರಣ ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿನ ಹೈದರಾಬಾದ್ ಮೂಲದ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್) ಹವಾಮಾನ ಹಾಗೂ ವಾತಾವರಣ ಅಧ್ಯಯನಕ್ಕಾಗಿ ಉಡಾವಣೆ ಮಾಡಿದ್ದಾಗಿದ್ದು, ಹವಾಮಾನ ಅಧ್ಯಯನಾಶೀಲ ವೈಜ್ಞಾನಿಕ ಉಪಕರಣ (ಪೇಲೋಡ್) ವೊಂದು ಪ್ಯಾರಾಚೂಟ್ ನ ನೆರವಿನಿಂದ ಚಡಚಣ ತಾಲೂಕಿನ ಗ್ರಾಮವೊಂದರ ಜಮೀನಿನಲ್ಲಿ ಬಂದಿಳಿದಿದೆ. ಜಿಲ್ಲಾಡಳಿತವು ಸಂಬಂಧಿತ ಸಂಸ್ಥೆಯನ್ನು ಸಂಪರ್ಕಿಸಿ ಈಗಾಗಲೇ ಮಾಹಿತಿ ಒದಗಿಸಿದೆ.
ಸಂಸ್ಥೆಯ ಅಧಿಕಾರಿಗಳ ತಂಡ ಸದ್ಯದಲ್ಲಿಯೇ ವಿಜಯಪುರಕ್ಕೆ ಆಗಮಿಸಲಿದೆ. ಅಲ್ಲದೆ, ಜಮೀನಿನಲ್ಲಿ ಬಿದ್ದಿರುವ ಪ್ಯಾರಾಚೂಟ್ ಹಾಗೂ ಪೆಲೋಡ್, ಅದಕ್ಕೆ ಸಬಂಧಿಸಿದ ಸಾಧನಾಸಲಕರಣೆಗಳನ್ನು ತೆಗೆದುಕೊಂಡು ಹೋಗಲಿದೆ.
ಹೀಗಾಗಿ, ಈ ಬಗ್ಗೆ ಯಾರೂ ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.