ಹೊಸದಿಗಂತ ಚಿಕ್ಕಮಗಳೂರು:
ಮಲೆನಾಡು ಭಾಗದಲ್ಲಿ ಮುಂದುವರಿದ ಗಾಳಿ-ಮಳೆಯಿಂದ ಕೊಪ್ಪ ತಾಲೂಕಿನ ಹುತ್ತಿನಗದ್ದೆ ಗ್ರಾಮದಲ್ಲಿ ಭೂ ಕುಸಿತ ಸಂಭವಿಸಿದೆ. ಇದರಿಂದ ಸಚಿನ್ ಎಂಬುವರ ಮನೆ ಕುಸಿಯುತ್ತಿದ್ದು ಆತಂಕದಲ್ಲಿದ್ದಾರೆ.
ಮನೆ ಪಕ್ಕದಲ್ಲೇ ಧರೆ ಕುಸಿಯುತ್ತಿದೆ. ಕ್ಷಣ ಕ್ಷಣಕ್ಕೂ ಮಣ್ಣು ಜರುಗುತ್ತಲೇ ಇದೆ. ಮತ್ತಷ್ಟು ಕುಸಿದರೆ ಮನೆಯೇ ಕೊಚ್ಚಿ ಹೋಗುವ ಸಾಧ್ಯತೆ ಇದೆ. ವಿಷಯ ತಿಳಿಸಿದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಸೇತುವೆಯೊಂದು ಮುಳುಗಿ ಜನರು ಪರದಾಡುವಂತಾಗಿದೆ.
ನೀರಿನ ಏರಿಕೆಯಿಂದ ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ನಿರಂತರ ಮಳೆಯಿಂದ ಹೇಮಾವತಿ ಮೈದುಂಬಿ ಹರಿಯುತ್ತಿದ್ದು ಮೂಡಿಗೆರೆ ತಾಲ್ಲೂಕಿನ ಹೆಸಗೋಡು ಗ್ರಾಮದಲ್ಲಿ ತೋಟಗಳಿಗೆ ನೀರು ನುಗ್ಗಿದೆ. ಕಾಫಿತೋಟ, ಅಡಿಕೆ ತೋಟಗಳು ಜಾಲಾವೃತಗೊಂಡಿದೆ.
ಹೇಮಾವತಿ ನದಿ ಪಾತ್ರದ ಕೆಸವಳಲು ಕೂಡಿಗೆ ಸಂಗಮ ಕೂಡ ಭರ್ತಿಯಾಗಿದೆ. ಪ್ರತಿದಿನ ನೂರಾರು ಜನ ಭಕ್ತರು ಇಲ್ಲಿ ಸೇರುತ್ತಾರೆ. ದೃಷ್ಠಿ ತೆಗೆಸಿಕೊಳ್ಳಲೆಂದು ಇಲ್ಲಿಗೆ ಆಗಮಿಸುತ್ತಾರೆ. ಹೇಮಾವತಿ ಅಬ್ಬರಕ್ಕೆ ಸಂಗಮ ಮುಳುಗಿದೆ.
ಚಿಕ್ಕಮಗಳೂರು ಸೇರಿದಂತೆ ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲ್ಲೂಕುಗಳಲ್ಲಿ ಮಳೆ ಮುಂದುವರಿದಿದೆ.