– ಜಗದೀಶ ಎಂ. ಗಾಣಿಗೇರ
ಬಾಗಲಕೋಟೆ: ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ರಾಜ್ಯದಲ್ಲಿ ಹಿಡಿದರೆ ಎಲ್ಲ ಜನರಿಗೆ ಉಚಿತ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿತ್ತು. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದೆ ತಡ ಈಗ ಗ್ಯಾರಂಟಿ ಯೋಜನೆಗಳನ್ನು ಸಹ ಘೋಷಣೆ ಮಾಡಿ ಜಾರಿಗಾಗಿ ಆದೇಶ ಮಾಡಿದೆ. ಆದರೆ, ಈಗ ಫಲಾನುಭವಿಗಳಾಗುವುದು ಮಾತ್ರ ಜನರಿಂದ ಬಾಕಿ ಇದೆ. ಆದರೆ, ಪ್ರತಿಯೊಂದಕ್ಕೂ ಆಧಾ ಕಡ್ಡಾಯವಾಗಿದ್ದರಿಂದ ಅವುಗಳ ತಿದ್ದುಪಡಿಗಾಗಿ ಆಧಾರ್ ಕೇಂದ್ರದತ್ತ ಜನ ಮುಗಿಬಿದ್ದಿದ್ದಾರೆ.
ಗೃಹಲಕ್ಷ್ಮೀ, ಗೃಹ ಜ್ಯೋತಿ ಹೀಗೆ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನರ ಮನೆ ಬಾಗಿಲಿಗೆ ಮುಟ್ಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಇತ್ತ ಜನರೂ ದಾಖಲೆಗಳನ್ನು ಕೂಡ ತಮ್ಮ ಸರಿಯಾಗಿ ಸಿದ್ಧಪಡಿಸಿಕೊಳ್ಳಲು ನಿರತರಾಗಿದ್ದಾರೆ. ಆದರೆ ಬ್ಯಾಂಕ್ ಖಾತೆ ಹಾಗೂ ಆಧಾರ ಕಾರ್ಡ್ ಸರಿಯಾಗಿ ಲಿಂಕ್ ಆಗದೇ ಇರುವುದು, ಮೊಬೈಲ್ ನಂಬರ್ ಇಲ್ಲದೇ ಇರುವುದು ಹೀಗೆ ಹಲವಾರು ಸಮಸ್ಯೆಗಳಿಂದ ಆಧಾರ್ ಪಡೆದುಕೊಂಡವರು ಸಮಸ್ಯೆಗೆ ಸಿಲುಕಿದ್ದು ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಕಡಿಮೆ ಸಂಖ್ಯೆಯಲ್ಲಿವೆ ಆಧಾರ ಕೇಂದ್ರ:
ಕಳೆದ ಐದಾರು ದಿನಗಳಿಂದ ಬಾಗಲಕೋಟೆಯ ಹಳೆ ಕೋರ್ಟ್ ಸಮೀಪ, ಯುನಿಯನ್ ಬ್ಯಾಂಕ್, ಕರ್ನಾಟಕ ಒನ್ ಕೇಂದ್ರ, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್, ತಹಶೀಲ್ದಾರ್ ಕಚೇರಿ, ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾರ ತಿದ್ದುಪಡಿ ಹಾಗೂ ಆಧಾರ ಕಾರ್ಡ್ ಪಡೆದುಕೊಳ್ಳಲು ಕೇಂದ್ರಗಳನ್ನು ತೆರೆಯಲಾಗಿದೆ. ನಾಲೈದು ಕಡೆ ಆಧಾರ ತಿದ್ದುಪಡಿ ಕೇಂದ್ರಗಳು ಇರುವುದರಿಂದ ಜನರು ಮುಗಿ ಬೀಳುತ್ತಿರುವುದು ಸಾಮಾನ್ಯವಾಗಿದೆ.
ಆಧಾರ್ ಕೇಂದ್ರ ಬಂದ್:
ಹಿಂದೆ ಪ್ರತಿಯೊಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಾಗೂ ಹೊರಗಡೆ ಆಧಾರ ತಿದ್ದುಪಡಿ ಕೇಂದ್ರಗಳನ್ನು ತೆರೆಯಲಾಗಿತ್ತು. ಈಗ ಕೆಲವೊಂದು ಕಡೆ ಆಧಾರ ಕೇಂದ್ರಗಳನ್ನು ಬಂದ್ ಮಾಡಿರುವುದು ಒಂದು ಕಡೆಯಾದರೆ ಇತ್ತ ರಾಜ್ಯ ಸರ್ಕಾರ ಜನರಿಗೆ ನೀಡಿದ ಗ್ಯಾರಂಟಿಯನ್ನು ಪಡೆದುಕೊಳ್ಳಲು ಸಮರ್ಪಕ ಆಧಾರ ಇಲ್ಲದಿದ್ದರೆ ಆಧಾರ್ ತಿದ್ದುಪಡಿಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ನಸುಕಿನ ಜಾವದಲ್ಲೇ ಸರದಿ:
ಬಾಗಲಕೋಟೆ ಹಾಗೂ ನವನಗರದಲ್ಲಿ ಇರುವ ಕೆಲವೊಂದು ಆಧಾರ ಕೇಂದ್ರಗಳಲ್ಲಿ ತಮ್ಮ ಆಧಾರ್ ತಿದ್ದುಪಡಿಗಾಗಿ ಬೆಳಗ್ಗೆ 6 ಗಂಟೆಗೆ ಜನ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಇನ್ನೂ ಚಿಕ್ಕಮಕ್ಕಳನ್ನು ಸಹ ಕರೆದುಕೊಂಡು ಬಂದು ಸರದಿಯಲ್ಲಿ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಡಳಿತ ಇತ್ತ ಗಮನ ಹರಿಸಿ ಆಧಾರ ತಿದ್ದುಪಡಿ ಹಾಗೂ ಆಧಾರ್ ಕೇಂದ್ರಗಳನ್ನು ಹೆಚ್ಚಿಸಿದರೆ ಒಳ್ಳೆಯದಾಗುತ್ತದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.