ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಂದು ಅಯೋಧ್ಯೆಗೆ ಹೋಗಲು ಹಿಂದೇಟು ಹಾಕುತ್ತಿದ್ದವರು ಇಂದು ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ಬಯಸುತ್ತಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮಥುರಾದಲ್ಲಿ (Mathura) ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಅಯೋಧ್ಯೆಗೆ ಹೋಗಲು ಹಿಂದೇಟು ಹಾಕುತ್ತಿದ್ದ ಜನ ಈಗ ಜನವರಿ 22 ರಂದು ರಾಮಮಂದಿರ (Ram Mandir) ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಕೆಲವರು ದೂರುತ್ತಿದ್ದಾರೆ ಎಂದು ಹೇಳಿದರು.
ಈ ಹಿಂದೆ ರಸ್ತೆಗಳು ಕೂಡ ಕಳಪೆ ಸ್ಥಿತಿಯಲ್ಲಿದ್ದು, ನಗರಕ್ಕೆ ಸಂಪರ್ಕ ಕಲ್ಪಿಸುವ ಒಂದೇ ರೈಲು ಮಾರ್ಗವಿತ್ತು. ಆದರೆ ಈಗ ಎಲ್ಲಾ ಕಡೆಯಿಂದ ನಾಲ್ಕು ಪಥದ ಸಂಪರ್ಕವಿದೆ. ಜನವರಿ 22 ರ ನಂತರ ಅಯೋಧ್ಯೆಗೆ ಭೇಟಿ ನೀಡುವುದು ತ್ರೇತಾ ಯುಗವನ್ನು ನೆನಪಿಸುತ್ತದೆ ಎಂದರು.
ಸಾವಿರಾರು ವರ್ಷಗಳ ಹಿಂದೆ ರಾಮನು ಪುಷ್ಪಕ ವಿಮಾನದಿಂದ (Pushpak Viman) ಅಯೋಧ್ಯೆಗೆ ಬಂದನು ಎಂದು ಹೇಳಲಾಗುತ್ತಿದೆ. ಅಂತೆಯೇ ಈಗಾಗಲೇ ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಹ ಉದ್ಘಾಟಿಸಲಾಗಿದೆ. ರೈಲು ಮಾರ್ಗವನ್ನು ಡಬಲ್ ಲೈನ್ನೊಂದಿಗೆ ಸಂಪರ್ಕಿಸಲಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಅಯೋಧ್ಯೆ ಮತ್ತು ಸುತ್ತಮುತ್ತ ಇನ್ನೂ 5-6 ಹೊಸ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.
ಅಯೋಧ್ಯೆಯನ್ನು ಜಲಮಾರ್ಗದ ಮೂಲಕವೂ ಸಂಪರ್ಕಿಸಲು ಸರ್ಕಾರ ಹಲವು ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.