ಹೊಸದಿಗಂತ ವರದಿ ಹಾವೇರಿ :
ಆನ್ ಲೈನ್ ವಂಚನೆ ಕುರಿತು ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ, ವಂಚಕರು ಹಲವು ರೀತಿಯಲ್ಲಿ ಜನರನ್ನು ವಂಚಿಸುತ್ತಲೇ ಇದ್ದಾರೆ. ಇದೀಗ ಜ್ಯೋತಿಷ್ಯ, ಮಾಟ-ಮಂತ್ರ, ವಶೀಕರಣ, ಕಂಕಣ ಬಲ, ಮದುವೆಗೆ ಗ್ರಹಬಲದ ಕಾರಣ ನೀಡಿ ಪೂಜೆ ಮಾಡುವ ನೆಪದಲ್ಲಿ ವಂಚನೆ ಶುರುವಿಟ್ಟುಕೊಂಡಿದ್ದಾರೆ.
ಇದೀಗ ಜಿಲ್ಲೆಯ ಯುವತಿಯೋರ್ವಳಿಗೆ ದೃಷ್ಟಿ ದೋಷವಿದೆ ಎಂದು Parihar_tantrikaa ಹೆಸರಿನಿಂದ ಮೆಸೇಜ್ ಕಳಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದಾಗ ಶಾಂತಿ ಪೂಜೆ ಮಾಡಿಸಲೇ ಬೇಕು, ತಪ್ಪಿದಲ್ಲಿ ನಿಮ್ಮ ತಂದೆ ತಾಯಿ ಸಾವನ್ನಪ್ಪುತ್ತಾರೆ ಎಂದು ಗುರೂಜಿ ಹೆಸರಿನ ವಂಚಕ ಬೆದರಿಸಿದ್ದಾನೆ.
ತಂದೆ- ತಾಯಿಯ ಸಾವಿನ ಬೆದರಿಕೆಗೆ ಹೆದರಿದ ಯುವತಿಯನ್ನು ಬ್ಲಾಕ್ ಮೇಲ್ ಮಾಡಿ, ಯುವತಿ ಖಾತೆಯಿಂದ ಹಂತ ಹಂತವಾಗಿ ಬರೋಬ್ಬರಿ ರೂ.1,35,833 ಹಣವನ್ನು ಹಾಕಿಸಿಕೊಂಡು ಯಾಮಾರಿಸಿದ್ದಾನೆ.
ಇದೀಗ ಹಣ ಕಳೆದುಕೊಂಡ ಯುವತಿ ನಗರದ ಸಿಇಎನ್ ಕ್ರೈಂ ಶಾಖೆಗೆ ದೂರು ಸಲ್ಲಿಸಿ ಹಣ ವಸೂಲಿ ಮಾಡಿಕೊಡಿ ಎಂದು ಅಲವತ್ತುಕೊಂಡಿದ್ದಾಳೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.