ಹೊಸದಿಗಂತ ಚಿಕ್ಕಮಗಳೂರು:
ಸುಮಾರು 2 ಲಕ್ಷ ರೂ. ಬೆಲೆಯ ಪೆಟ್ರೋಲ್ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗೋಣಿಬೀಡು ಪೊಲೀಸರು ಬಂಧಿಸಿದ್ದು, ಪೆಟ್ರೋಲ್ ಸಹಿತ 8 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ ಅವರು, ಮೂಡಿಗೆರೆ ತಾಲ್ಲೂಕು ಗೋಣಿಬೀಡಿನ ಹಿರೇಶಿಗಿರ ವಿಜಯಕುಮಾರ್ ಮತ್ತು ಹರ್ಷ ಬಂಧಿತ ಆರೋಪಿಗಳಾಗಿದ್ದು, ಅವರು ತಂದೆ ಮತ್ತು ಮಗ ಆಗಿದ್ದಾರೆ. ಮತ್ತಿತರೆ ಆರೋಪಿಗಳಾದ ದಿನೇಶ್ ಶೆಟ್ಟಿ, ಕಿರಣ್ ಮತ್ತು ಸಹಚರರು ತಲೆಮರೆಸಿಕೊಂಡಿದ್ದು ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಬುಧವಾರ ಹಿರೇಶಿಗರ ಗ್ರಾಮದಲ್ಲಿ ವಾರಸುದಾರರಿಲ್ಲದ ಪೆಟ್ರೋಲ್ ಬ್ಯಾರಲ್ಗಳನ್ನೊಳಗೊಂಡ ಲಾರಿ ಪತ್ತೆಯಾಗಿತ್ತು. ಈ ಸಂಬಂಧ ಪೆಟ್ರೋನೆಟ್ ಕಂಪನಿಯ ಮ್ಯಾನೇಜರ್ ಎಸ್.ರವೀಂದ್ರ ಅವರು ದೂರು ನೀಡಿ ತಮ್ಮ ಕಂಪನಿಯ ಪೆಟ್ರೋಲಿಯಂ ಪೈಪ್ ಲೈನ್ ಮಂಗಳೂರಿಂದ ಬೆಂಗಳೂರಿಗೆ ಹಾದು ಹೋಗಿದ್ದು ಗೋಣಿಬೀಡು ಠಾಣಾ ವ್ಯಾಪ್ತಿಯ ಹಿರೇಶಿಗರ ಗ್ರಾಮದ ಬಳಿ ಪೈಪ್ ಲೈನ್ ನಲ್ಲಿ ಪೆಟ್ರೋಲ್ ಒತ್ತಡದಲ್ಲಿ ವ್ಯತ್ಯಾಸವಾಗಿದ್ದು ಅಂದಾಜು 2ಲಕ್ಷ ಮೌಲ್ಯದ 2000 ಲೀಟರ್ ನಷ್ಟು ಇಂಧನ ಕಳ್ಳತನವಾಗಿದೆ ಎಂದು ತಿಳಿಸಿದ್ದರು ಎಂದರು.
ದೂರನ್ನಾಧರಿಸಿ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ಪ್ರಕರಣ ನಡೆದು ೨೪ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದೆ ಎಂದು ತಿಳಿಸಿದರು.