ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡ ಬಳಿಕ ಪ್ರತಿ ದಿನ ಲಕ್ಷ ಲಕ್ಷ ಭಕ್ತರು ಮಂದಿರಕ್ಕೆ ಭೇಟಿ ನೀಡಿ ರಾಮಲಲಾ ದರುಶನ ಪಡೆಯುತ್ತಿದ್ದಾರೆ.
ಹೀಗಾಗಿ ಹೊಟೇಲ್ , ರೆಸ್ಟೋರೆಂಟ್, ರೂಂ ಎಲ್ಲವೂ ತುಂಬಿದೆ. ಇದರಿಂದ ದೊಡ್ಡ ಕಂಪನಿಗಳು ಆಯೋದ್ಯೆಯಲ್ಲಿ ಹೊಟೇಲ್, ರೆಸ್ಟೋರೆಂಟ್ ಸೇರಿದಂತೆ ಹಲವು ವ್ಯಾಪಾರ ವಹಿವಾಟು ವಿಸ್ತರಿಸಲು ಪ್ಲಾನ್ ಮಾಡಿದೆ.
ಈ ಪೈಕಿ ಅಮೆರಿಕ ಮೂಲದ ಜನಪ್ರಿಯ ಕೆಎಫ್ಸಿ ಚಿಕನ್ ಆಯೋಧ್ಯೆಯಲ್ಲಿ ಔಟ್ಲೆಟ್ ತೆರೆಯಲು ಪ್ಲಾನ್ ಮಾಡಿದೆ. ಆದರೆ ಕೇವಲ ಸಸ್ಯಾಹಾರ ಆಹಾರ ನೀಡುವುದಾದರೆ ಮಾತ್ರ ಆಯೋಧ್ಯೆಯಲ್ಲಿ KFC ಶಾಖೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.
ಆಯೋಧ್ಯೆ ರಾಮ ಮಂದಿರ ಸುತ್ತಿನ 15 ಕಿಲೋಮೀಟರ್ ಒಳಗಡೆ ಯಾವುದೇ ಮಾಂಸಾಹಾರ ಮಾರಾಟಕ್ಕೆ ಅವಕಾಶವಿಲ್ಲ. ಇದರ ಜೊತೆಗೆ ಮದ್ಯ ಮಾರಾಟಕ್ಕೂ ಅವಕಾಶವಿಲ್ಲ. ಹಿಂದೂಗಳ ಅಂತ್ಯಂತ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಕಾರಣ ಈ ಪುಣ್ಯಸ್ಥಳದ ಪಾವಿತ್ರ್ಯತೆ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.
KFC ಸಂಸ್ಥೆ ಈಗಾಗಲೇ ಆಯೋಧ್ಯೆ ಲಖನೌ ಹೆದ್ದಾರಿಯಲ್ಲಿ ಶಾಖೆ ತೆರೆದಿದೆ. ಇದು ರಾಮ ಮಂದಿರದಿಂದ ಸಾಕಷ್ಟು ದೂರವಿದೆ. ಆದರೆ ಆಯೋಧ್ಯೆ ವ್ಯಾಪ್ತಿಯೊಳಗಡೆ KFC ಶಾಖೆ ತೆರಯಲು ಕೆಲ ನಿರ್ಬಂಧಗಳಿವೆ. ಕೇವಲ ಸಸ್ಯಾಹಾರಿ ಆಹಾರ ಮಾತ್ರ ನೀಡುವುದಾದರೆ ಕೆಎಫ್ಸಿ ಸೇರಿದಂತೆ ಇತರ ಆಹಾರ ಉತ್ಪನ್ನಗಳ ಮಳಿಗೆಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರದ ಅಧಿಕಾರಿ ವಿಶಾಲ್ ಸಿಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಆಯೋಧ್ಯೆ ಸನಿಹದಲ್ಲಿರುವ ಪಂಚ್ ಕೋಶಿ ಮಾರ್ಗ, ಪಂಚ ಕೋಶಿ ಪರಿಕ್ರಮ ಸೇರಿದಂತೆ ಸುತ್ತ ಮತ್ತಲಿನ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಆಹಾರ ಮಳಿಗೆ ತೆರೆಯಲು ಕೆಲ ನಿಬಂಧನೆಗಳನ್ನು ಪಾಲಿಸವುದು ಅಗತ್ಯವಾಗಿದೆ. ಆಯೋಧ್ಯೆಯಲ್ಲಿ ಆಹಾರ ಸೇರಿದಂತೆ ಇತರ ವ್ಯಾಪಾರ ವಹಿವಾಟಿಗೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ ಮದ್ಯ, ಮಾಂಸ ಮಾರಾಟಕ್ಕೆ ಅವಕಾಶವಿಲ್ಲ. ಮಾಂಸಾಹಾರಿ ಉತ್ಪನ್ನಗಳನ್ನು ನೀಡುವಂತಿಲ್ಲ ಎಂದು ವಿಶಾಲ್ ಸಿಂಗ್ ಹೇಳಿದ್ದಾರೆ.
ಶ್ರೀರಾಮ ಮಂದಿರದಿಂದ ಆಯೋಧ್ಯೆಯ ಧಾರ್ಮಿಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜ ಸಿಕ್ಕಿದೆ. ಸದ್ಯ 10 ರಿಂದ 12 ಲಕ್ಷ ಭಕ್ತರು ಪ್ರತಿ ವಾರ ಆಗಮಿಸುತ್ತಿದ್ದಾರೆ. ಎಪ್ರಿಲ್ 17ರಂದು ರಾಮನವಮಿ ಹಿನ್ನಲೆಯಲ್ಲಿ ಇನ್ನು ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಇಷ್ಟೇ ಅಲ್ಲ ಶಾಲಾ ಕಾಲೇಜುಗಳಿಗೆ ಸಾಮಾನ್ಯವಾಗಿ ರಜೆ ಇರುವುದರಿಂದ ಮುಂದಿನ ತಿಂಗಳನಿಂದ ಭಕ್ತರ ಸಂಖ್ಯೆ ಹೆಚ್ಚಾಗಲಿದೆ ಎಂದು ಜಿಲ್ಲಾಡಳಿತ ಹೇಳಿದೆ