ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ .
ಮಣಿಪುರವು ಹೊತ್ತಿ ಉರಿಯುತ್ತಿರುವಾಗ ಸಂಸತ್ತಿನಲ್ಲಿ ನಗುವುದು ಮತ್ತು ಹಾಸ್ಯ ಚಟಾಕಿ ಹಾರಿಸುವುದು ದೇಶದ ಪ್ರಧಾನಿಗೆ ಸಲ್ಲದು ಎಂದು ಕಿಡಿ ಕಾರಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಎರಡು ಗಂಟೆಗಳ ಭಾಷಣದಲ್ಲಿ ಮಣಿಪುರದ ಕುರಿತು ಕೇವಲ ಎರಡು ನಿಮಿಷ ಮಾತನಾಡಿದ್ದಾರೆ ಎಂದು ಟೀಕಿಸಿದರು.
ನಿನ್ನೆ ನಾನು ಎರಡು ಗಂಟೆಗಳ ಕಾಲ ನಗುವುದು, ತಮಾಷೆ ಮಾಡುವುದು, ಘೋಷಣೆ ಕೂಗುತ್ತಾ ಮಾತನಾಡುವುದನ್ನು ನೋಡಿದೆ. ಮಣಿಪುರ ರಾಜ್ಯ ಹಲವು ತಿಂಗಳಿಂದ ಹೊತ್ತಿ ಉರಿಯುತ್ತಿದೆ ಎಂಬುದನ್ನು ಪ್ರಧಾನಿ ಮರೆತಂತಿದೆ ಎಂದು ವಾಗ್ದಾಳಿ ನಡೆಸಿದರು.
ಮಣಿಪುರ ಸಮಸ್ಯೆ ಕಾಂಗ್ರೆಸ್ ಅಥವಾ ನನ್ನದಲ್ಲ. ಅಲ್ಲಿ ಏನು ನಡೆಯುತ್ತಿದೆ ಮತ್ತು ಹಿಂಸಾಚಾರ ಏಕೆ ನಿಲ್ಲಿಸುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು . ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದಾರೆ ಎಂಬ ತಮ್ಮ ಹೇಳಿಕೆ ಪೊಳ್ಳು ಮಾತುಗಳಲ್ಲ ಎಂದರು.
ಪ್ರಧಾನಿ ಮೋದಿ ಮಣಿಪುರ ಹೊತ್ತಿ ಉರಿಯಬೇಕು ಎಂದು ಬಯಸುತ್ತಾರೆ ಮತ್ತು ಆ ಬೆಂಕಿಯನ್ನು ನಂದಿಸಬಾರದು ಎಂಬುದು ಅವರ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಭಾರತೀಯ ಸೇನೆಯು 2-3 ದಿನಗಳಲ್ಲಿ ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸಬಹುದು. ಆದರೆ ಕೇಂದ್ರ ಸರ್ಕಾರ ಅಲ್ಲಿ ಸೇನೆ ನಿಯೋಜಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.