ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರ ಅಮಾನತು: ಆದೇಶ ಹಿಂಪಡೆಯಲು ರೈತ ಸಂಘದ ಆಗ್ರಹ

ಹೊಸದಿಗಂತ, ಚಿತ್ರದುರ್ಗ:
ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11 ಜನ ಮೃತಪಟ್ಟ ಪ್ರಕರಣದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದನ್ನು ಖಂಡಿಸಿ ರೈತ ಸಂಘ ಮತ್ತು ಹಸಿರು ಸೇನೆ (ಡಾ. ವಾಸುದೇವ ಮೇಟಿ ಬಣ) ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಐಪಿಎಲ್ ಫೈನಲ್‌ನಲ್ಲಿ ಗೆದ್ದ ಆರ್‌ಸಿಬಿ ಸಂಭ್ರಮಾಚರಣೆ ಸಂದರ್ಭಲ್ಲಿ ರಾತ್ರಿ ಇಡೀ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ನಗರ, ಗ್ರಾಮಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಇದಾದ ಮರುದಿನವೇ ಬೆಂಗಳೂರಿನ ವಿಧಾನಸೌಧದ ಮುಂದೆ ಕ್ರಿಕೆಟ್ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಬಳಿಕ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಂಗಣಕ್ಕೆ ಜನರನ್ನು ಬಿಡುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ 11 ಜನರು ಪ್ರಾಣ ಕಳೆದುಕೊಂಡಿದ್ದು ವಿಷಾದನೀಯ ಎಂದು ರೈತ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಮರುದಿನವೇ ಕ್ರಿಕೆಟ್ ಗೆಲುವಿನ ಸಂಭ್ರಮಾಚರಣೆ ಮಾಡಬೇಕೆಂದು ತೀರ್ಮಾನಿಸಿದ್ದು, ಸರ್ಕಾರದ ಮೊದಲನೇ ತಪ್ಪು. ಏಕೆಂದರೆ ಕ್ರಿಕೆಟ್ ಅಭಿಮಾನಿಗಳು ಭಾರತ ದೇಶದ್ಯಂತ ಇದ್ದಾರೆ. ಆರ್.ಸಿ.ಬಿ. ತಂಡವು 18 ವರ್ಷಗಳ ನಂತರ ಐಪಿಎಲ್ ಕಫ್ ಗೆದ್ದಿರುವ ಹಿನ್ನೆಲೆಯಲ್ಲಿ, ನಾವುಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂಬ ಆಸೆಯಿಂದ ಲಕ್ಷಗಟ್ಟಲೇ ಕ್ರಿಕೆಟ್ ಅಭಿಮಾನಿಗಳು ಬರುವ ನಿರೀಕ್ಷೆಯಿದ್ದರೂ ಮುಂಜಾಗೃತ ಕ್ರಮವಾಗಿ ಕೆಲವು ದಿನಗಳ ನಂತರ ಕ್ರಿಕೆಟ್ ಸಂಭ್ರಮಾಚರಣೆ ಮಾಡಬೇಕಾಗಿತ್ತು. ಸರ್ಕಾರದ ಈ ಆತುರದ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳು ಬಲಿಯಾಗುವಂತಾಯಿತು ಎಂದು ಕಿಡಿಕಾರಿದರು.
ಸರ್ಕಾರದ ಕಾರ್ಯಕ್ರಮಗಳನ್ನು ದೊಡ್ಡ ದೊಡ್ಡ ಮಟ್ಟದಲ್ಲಿ ಮಾಡಬೇಕೆಂದರೆ, ಸುಮಾರು 15 ದಿನಗಳ ಕಾಲ ಕಾಲಾವಕಾಶ ತೆಗೆದುಕೊಳ್ಳುತ್ತಾರೆ. ಆದರೆ ಸರ್ಕಾರ 24 ಗಂಟೆಗಳ ಕಾಲದಲ್ಲಿ ಕ್ರಿಕೆಟ್ ಸಂಭ್ರಮಾಚರಣೆ ಮಾಡಲು ಹೇಗೆ ಸಾಧ್ಯ. ಅವಘಡಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಇದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಪ್ರಮುಖ ರಾಜಕಾರಣಿಗಳು ರಾತ್ರೋರಾತ್ರಿ ಒತ್ತಡ ಹಾಕಿ ಸಂಭ್ರಮಾಚರಣೆ ಮಾಡಲು ಸೂಚಿಸಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಬಲಿಪಶುಗಳನ್ನು ಮಾಡಲಾಗಿದೆ ಎಂದು ದೂರಿದರು.
ಇಂತಹ ಅವಘಡ ನಡೆಯಲು ರಾಜ್ಯ ಸರ್ಕಾರದ ಆತುರದ ನಿರ್ಧಾರವೇ ಕಾರಣ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಇವರುಗಳು ಮುಖ್ಯ ಕಾರಣಕರ್ತರಾಗಿರುತ್ತಾರೆ. ಹಾಗಾಗಿ ಅವರು ನೈತಿಕ ಹೊಣೆ ಹೊತ್ತು ಈ ಕೂಡಲೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು. ಅಲ್ಲದೇ ಪೊಲೀಸರ ಅಮಾನತನ್ನು ಕೂಡಲೇ ಹಿಂಪಡೆಯಬೇಕು. ತಪ್ಪಿದಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಈ.ಆರ್.ಲಕ್ಷ್ಮೀಕಾಂತ್, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಪಿ.ನಾಗರಾಜ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಬಿ.ಶ್ರೀನಿವಾಸ್, ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ನಾಗರಾಜ್ ಮೀಸೆ, ವೇಮರೆಡ್ಡಿ, ವೆಂಕಟೇಶ್ರೆಡ್ಡಿ, ಆಂಜಿನಪ್ಪ ಮತ್ತಿತರ ರೈತ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!