ಹೊಸದಿಗಂತ ಡಿಜಿಟಲ್ ಡೆಸ್ಕ್:
ಜರ್ಮನಿಯಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ಬಂದಿಲ್ಲ. ನಿನ್ನೆ ಕೊನೆ ಕ್ಷಣದಲ್ಲಿ ಅವರು ಟಿಕೆಟ್ ಬುಕ್ ಮಾಡಿ ಮಧ್ಯರಾತ್ರಿ ವಿಮಾನವೇರಿ ಬೆಂಗಳೂರಿಗೆ ಬರಬೇಕಾಗಿತ್ತು. ಅದಕ್ಕಾಗಿ ಎಸ್ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಕಾದು ಕುಳಿತಿದ್ದರು. ಆದರೆ ಕಡೆಗೂ ರೇವಣ್ಣ ಬರಲೇ ಇಲ್ಲ.
ಎರಡು ಬಾರಿ ಟಿಕೆಟ್ ರದ್ದು ಮಾಡಿದ್ದ ಪ್ರಜ್ವಲ್, ಒಮ್ಮೆ ಟಿಕೆಟ್ ಮುಂದೂಡಿಕೆ ಮಾಡಿಕೊಂಡರು. ನಂತರ ಆ ಟಿಕೆಟನ್ನೂ ರದ್ದು ಮಾಡಿದರು. ಇದಾದ ಬಳಿಕ ಇಂದು ಬೆಳಗ್ಗೆ ಮತ್ತೆ LH764 ಲುಫ್ತಾನ್ಸ್ ವಿಮಾನದ ಟಿಕೆಟ್ ಕಾಯ್ದಿರಿಸಿದ್ದರು. ಹೀಗಾಗಿ ಬೆಂಗಳೂರಿಗೆ ಬರುತ್ತಾರೆ ಎಂದು ಎಸ್ಐಟಿ ಅಧಿಕಾರಿಗಳು ಕಾದು ಕುಳಿತಿದ್ದರು.ಆದರೆ ಪ್ರಜ್ವಲ್ ಮಾತ್ರ ಬರಲಿಲ್ಲ.
ಕೊನೆ ಕ್ಷಣದಲ್ಲಿ ಟಿಕೆಟ್ ಬುಕ್ ಆಗಿದ್ದರಿಂದ ಪ್ರಜ್ವಲ್ ಬರಬಹುದು ಎಂಬ ನಿರೀಕ್ಷೆ ಎಸ್ಐಟಿ ಅಧಿಕಾರಿಗಳಲ್ಲಿ ಇತ್ತು. ಆದರೆ, ಜರ್ಮನಿಯ ಕಾಲಮಾನ ಪ್ರಕಾರ 12.20ಕ್ಕೆ ವಿಮಾನ ಟೇಕಾಫ್ ಆಗಿದೆ. ಅತ್ತ ಟೇಕಾಫ್ ಆಗುತ್ತಿದ್ದಂತೆಯೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಪಟ್ಟಿ ಬಂದಿದೆ. ಏರ್ಪೋರ್ಟ್ನಲ್ಲೇ ಇದ್ದ ಎಸ್ಐಟಿ ಅಧಿಕಾರಿಗಳು, ಪ್ರಯಾಣಿಕರ ಹೆಸರು ಪರಿಶೀಲಿಸಿದ್ದಾರೆ. ಆದರೆ, ವಿಮಾನದಲ್ಲಿರುವ ಪ್ರಯಾಣಿಕರ ಪಟ್ಟಿಯಲ್ಲಿ ಪ್ರಜ್ವಲ್ ಹೆಸರು ಇರಲಿಲ್ಲ.