ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಸಂಸದ ಪ್ರಜ್ವಲ್ ರೇವಣ್ಣ ನನ್ನನ್ನು ಸಂಪರ್ಕಿಸಿಲ್ಲ. ಮೊದಲಿನಿಂದಲೂ ಪಕ್ಷದ ಚಟುವಟಿಕೆ ವೇಳೆಯೂ ನನ್ನ ಸಂಪರ್ಕ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಇದ್ದಾಗ ನನ್ನ ಸಂಪರ್ಕಕ್ಕೆ ಇರದ ಪ್ರಜ್ವಲ್ ವಿದೇಶದಲ್ಲಿ ಹೇಗೆ ಸಂಪರ್ಕದಲ್ಲಿರುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಜ್ವಲ್ ಪ್ರಕರಣದ ಎಸ್ಐಟಿ ತನಿಖೆಯ ಪ್ರಗತಿಯನ್ನು ಪ್ರಶ್ನಿಸಿದ ಅವರು, ಎಸ್ಐಟಿ ಕೆಲವರನ್ನು ಅನಗತ್ಯವಾಗಿ ಬಂಧಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ದೇವೇರಾಜೇಗೌಡರನ್ನು ಪ್ರಕರಣ ದಾಖಲಾಗಿ ಒಂದು ತಿಂಗಳ ನಂತರ ಬಂಧಿಸಿದ್ದು ಯಾಕೆ? ಎಸ್ಐಟಿಯವರಿಗೆ ದೇವೇರಾಜೇಗೌಡರಿಂದ ಏನು ಮಾಹಿತಿ ಬೇಕಿದೆ? ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಮಾಹಿತಿನಾ? ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿನಾ? ಈ ಪ್ರಕರಣದ ಆಡಿಯೋ ತುಣುಕು ಬಿಡುಗಡೆಯಾಗಿತ್ತಲ್ಲ ಅದರ ಮಾಹಿತಿನಾ? ಏತಕ್ಕಾಗಿ ಎಸ್ಐಟಿ ನಾಲ್ಕು ದಿನದಿಂದ ವಶಕ್ಕೆ ಪಡೆದುಕೊಂಡು ಇಟ್ಟುಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.