ಕೇರಳ ಜನತೆಗೆ ಓಣಂ ಹಬ್ಬದ ಶುಭಾಶಯ ತಿಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇರಳದ ಮಲೆಯಾಳಿಗಳಿಗೆ ಓಣಂ ಅತ್ಯಂತ ಪವಿತ್ರವಾದ ಹಬ್ಬವಾಗಿದೆ. ಈ ದಿನಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಕೇರಳದ ಜನತೆಗೆ ಓಣಂ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಟ್ವಿಟ್ಟರ್‌ ವೇದಿಕೆಯ ಮೂಲಕ ಶುಭ ಕೋರಿದ್ದು, “ಕೇರಳದಲ್ಲಿರುವ ಎಲ್ಲಾ ಸಹ ನಾಗರಿಕರಿಗೆ ಮತ್ತು ನಮ್ಮ ಸಹೋದರ ಸಹೋದರಿಯರಿಗೆ ಓಣಂ ಶುಭಾಶಯಗಳು! ಈ ಶುಭ ಸಂದರ್ಭದಲ್ಲಿ ನಾವು ಅಸಂಖ್ಯಾತ ವರಗಳನ್ನು ನೀಡಿದ ಪ್ರಕೃತಿ ಮಾತೆಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಈ ಹಬ್ಬ ಸುಗ್ಗಿಯ ಹಬ್ಬವಾಗಿ ಸಮೃದ್ಧಿ ಮತ್ತು ಎಲ್ಲರ ನಡುವೆ ಸಾಮರಸ್ಯದ ಮನೋಭಾವವನ್ನು ಉಂಟುಮಾಡಲಿ” ಎಂದು ಹಾರೈಸಿದರು.

ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಓಣಂ ಅನ್ನು ಆಚರಿಸಲಾಗುತ್ತದೆ. ಓಣಂ ಹಬ್ಬ ಕೊನೆಯಾಗುವ ಎರಡು ದಿನಗಳ ಮೊದಲು ತಿರುವೋಣಂ ಆಚರಿಸಲಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಓಣಂ ಆಚರಣೆಗಳು, ಮಾವೇಲಿ ಎಂದೂ ಕರೆಯಲ್ಪಡುವ ಪೂಜ್ಯ ರಾಜ ಮಹಾಬಲಿಯ ಪುನರಾಗಮನವನ್ನು ಸೂಚಿಸುತ್ತವೆ. ಈ ಹಬ್ಬವು ಕೇರಳದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ಸಂಕೇತವಾಗಿದೆ.

ಕೇರಳದಲ್ಲಿ 10 ದಿನಗಳ ಓಣಂ ಆಚರಣೆಗಳು ಆಗಸ್ಟ್ 20 ರಂದು ಅಥಂ ಆಚರಣೆಯೊಂದಿಗೆ ಪ್ರಾರಂಭವಾಯಿತು. ಇದು ರಾಜ ಮಹಾಬಲಿ ಮತ್ತು ವಾಮನರನ್ನು ಗೌರವಿಸುವ ಹಬ್ಬವಾಗಿದೆ. ಮಹಾಬಲಿಯನ್ನು ಸ್ವಾಗತಿಸಲು, ಜನರು ತಮ್ಮ ಮನೆ ಮತ್ತು ಸಂಸ್ಥೆಗಳ ಮುಂದೆ ಹೂವಿನ ರಂಗೋಲಿಗಳಿಂದ (ಪೂಳಕಂ)ಅಲಂಕರಿಸುತ್ತಾರೆ. ಶಾಲೆಗಳು, ವಿಶ್ವವಿದ್ಯಾನಿಲಯಗಳು, ಕಚೇರಿಗಳು ಮತ್ತು ಇತರ ಸ್ಥಳಗಳಲ್ಲಿ ಅನೇಕ ರೀತಿಯ ಆಚರಣೆಗಳು ಪ್ರಾರಂಭವಾಗುತ್ತವೆ.

ಈ ಸಂದರ್ಭದಲ್ಲಿ ಮನೆಯಲ್ಲಿಯೇ ವಿಶಿಷ್ಟವಾದ ಆಹಾರ ಪದಾರ್ಥಗಳನ್ನು ತಯಾರಿಸಿ ಇತರರಿಗೆ ಹಂಚಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!