ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಟ್ರಂಪ್ ಒಬ್ಬ ಸರ್ವಾಧಿಕಾರಿ, ಮೋದಿ ಅವರಿಗೆ ಗುಲಾಮನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ವಿರುದ್ಧ
ವಾಗ್ದಾಳಿ ನಡೆಸಿದ್ದಾರೆ.
ಚಿತ್ತಾಪುರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಖರ್ಗೆ ಅವರು, ಕೇಂದ್ರ ಸರ್ಕಾರ ಮತ್ತು ಅಮೆರಿಕದ ವಿದೇಶಾಂಗ ನೀತಿಯ ವಿರುದ್ಧ ಕೆಂಡ ಕಾರಿದ್ದಾರೆ. ಪ್ರಧಾನಿ ಮೋದಿ ಅಮೆರಿಕಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಬೈದು ಬೈದು ಅಧಿಕಾರಕ್ಕೆ ಬಂದವರು, ಇಂದು ಅಮೆರಿಕ ಹೇಳಿದಂತೆ ‘ಬೈಟೋ ಅಂದ್ರೆ ಬೈಟೋ, ಉಟೋ ಅಂದ್ರೆ ಉಟೋ’ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ದೇಶವನ್ನು ಅಮೆರಿಕದ ಬಳಿ ಅಡವಿಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
‘ಮೋದಿ ಬೆಳನಿಂದ ಸಂಜೆಯವರೆಗೆ ಕಾಂಗ್ರೆಸ್ಗೆ ಬೈಯುವುದೇ ಕೆಲಸವಾಗಿದೆ. ಊರೂರು ತಿರುಗುವುದು, ಹೋದಲೆಲ್ಲ ಕಾಂಗ್ರೆಸ್ ಗೆ ಬೈಯುವುದು. ಏಕೆಂದರೆ ಅವರಿಗೆ ಮಾಡಲು ಏನೂ ಆಗಲ್ಲ. ಅದಕ್ಕೆ ಕಾಂಗ್ರೆಸ್ ಬೈಯುವುದು. ಈ ದೇಶದಲ್ಲಿ ದೊಡ್ಡ ಕಾರ್ಖಾನೆಗಳು, ರಸ್ತೆಗಳು ಮತ್ತು ಶಾಲೆಗಳನ್ನು ಕಟ್ಟಿದ್ದು ಕಾಂಗ್ರೆಸ್. ನಾವು ದೇಶ ಕಟ್ಟುವ ಕೆಲಸ ಮಾಡಿದರೆ, ಮೋದಿ ಅವರು ದೇಶವನ್ನು ಒಡೆಯುವ, ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಅಮೆರಿಕಾ ಖಮೇನಿಯನ್ನ ಹತ್ಯೆ ಮಾಡಿದ್ರು, ಅಮೆರಿಕ ಪಕ್ಕದ ದೇಶದ ಅಧ್ಯಕ್ಷನ್ನ ಎಳೆದೊಯ್ದರು. ಒಂದು ದೇಶದ ಮುಖ್ಯಸ್ಥನನ್ನ ರೀತಿ ಅವರ ದೇಶದ ಒಳಗೆ ನುಗ್ಗಿ ಹತ್ಯೆ ಮಾಡಿದ್ರೆ ವಿಶ್ವ ಹೇಗೆ ಸುರಕ್ಷಿತವಾಗಿರುತ್ತಾ? ನೀವು ಎಲ್ಲರನ್ನ ಕೊಲ್ಲುತ್ತಾ ಹೋದ್ರೆ ಶಾಂತಿ ಬರುತ್ತಾ? ನಾವು ಗಾಂಧಿ ಹೇಳಿದ ದಾರಿಯಲ್ಲಿ ನಡೆಯಬೇಕು. ಅದುಬಿಟ್ಟು ಅಮೆರಿಕ ಜೊತೆಗೂಡಿ ನಮ್ಮ ದೇಶವನ್ನು ಹಾಳುಮಾಡುತ್ತಿದ್ದೀರಿ. ಅಮೆರಿಕ ಹೇಳಿದ ಹಾಗೆ ನೀವು(ಮೋದಿ) ಕೇಳುತ್ತಿದ್ದೀರಿ ಎಂದು ಟೀಕಿಸಿದರು.
ನಾವು ಯಾರ ಬಳಿ ವ್ಯಾಪಾರ ಮಾಡಬೇಕು ಅನ್ನೋದು ನಮಗೆ ಬಿಟ್ಟಿದ್ದು, ಆದರೆ ನಾವು ರಷ್ಯಾ ತೈಲ ಖರೀದಿಸಲು ಅಮೆರಿಕ ನಮಗೆ ಒಂದು ತಿಂಗಳ ಸಮಯ ಕೊಡುತ್ತದೆ ಎಂದರೆ ಏನರ್ಥ? ಕಚ್ಚಾತೈಲ ಖರೀದಿಗೆ ಟ್ರಂಪ್ ಅಪ್ಪಣೆ ಬೇಕಾ? ಮುಂದೆ ಟ್ರಂಪ್ ಹೇಳಿದ್ರೆ ಮಾತ್ರ ತೈಲ ಖರೀದಿ ಮಾಡಬೇಕು. ಇಲ್ಲಾಂದ್ರೆ ಇಲ್ಲ. ನೀವು ಗುಲಾಮಗಿರಿ ಮಾಡೋದಲ್ಲದೇ ನಮ್ಮ ದೇಶವನ್ನು ಗುಲಾಮಗಿರಿಗೆ ತಳ್ಳುತ್ತಿದ್ದೀರಿ ನಾವು ಗಾಂಧೀಜಿ ತೋರಿದ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ಅಮೆರಿಕದ ಸೊಕ್ಕಿಗೆ ಭಾರತ ಬಲಿಯಾಗಬಾರದು. ಎಂದು ಎಚ್ಚರಿಸಿದರು.



