ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ (ಡಿ.21) ಎರಡು ದಿನಗಳ ಕಾಲ ಕುವೈತ್ಗೆ ಪ್ರವಾಸ ಕೈಗೊಂಡಿದ್ದಾರೆ. 43 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಗಲ್ಫ್ ರಾಷ್ಟ್ರಕ್ಕೆ ಇದೇ ಮೊದಲು ಭೇಟಿ ನೀಡುತ್ತಿದ್ದಾರೆ.
ಭಾರತ ಮತ್ತು ಕುವೈತ್ ನಡುವಿನ “ಬಹುಮುಖಿ” ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಈ ಭೇಟಿಯು ಅವಕಾಶವನ್ನು ಒದಗಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಇದೀಗ ಪ್ರಧಾನಿ ಮೋದಿ ಕುವೈತ್ಗೆ ಭೇಟಿ ನೀಡಿದ್ದು, ಅಲ್ಲಿನ ಕುವೈತ್ ಭಾರತೀಯರು ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ.
ಕುವೈತ್ಗೆ ಭೇಟಿ ವೇಳೆ ಕೋಟ್ಯಂತರ ಹಿಂದುಗಳ ನಂಬಿಕೆಯ ಪ್ರತೀಕವಾಗಿರುವ ‘ರಾಮಾಯಣ’ ಮತ್ತು ‘ಮಹಾಭಾರತ’ ಎಂಬ ಪವಿತ್ರ ಗ್ರಂಥಗಳನ್ನು ಮೋದಿ ಹಿಡಿದುಕೊಂಡಿರುವ ಫೋಟೋವೊಂದು ವೈರಲ್ ಆಗುತ್ತಿದೆ.
ಅರೇಬಿಕ್ ಭಾಷೆಯಲ್ಲಿ ರಾಮಾಯಣ ಮತ್ತು ಮಹಾಭಾರತ
ವಿಷಯ ಏನೆಂದರೆ ಕುವೈತ್ನ ಪುಸ್ತಕ ಪ್ರಕಾಶಕರು ಅರೇಬಿಕ್ ಭಾಷೆಯಲ್ಲಿ ನಮ್ಮ ಹೆಮ್ಮೆಯ ರಾಮಾಯಣ ಮತ್ತು ಮಹಾಭಾರತ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದನ್ನು ಪ್ರಧಾನಿ ಮೋದಿ ಕುವೈತ್ಗೆ ಭೇಟಿ ನೀಡಿದ ವೇಳೆ ತೋರಿಸಿದ್ದಾರೆ. ಅರೇಬಿಕ್ ಭಾಷೆಯಲ್ಲಿ ಅನುವಾದಿಸಿರುವ ರಾಮಾಯಣ ಮತ್ತು ಮಹಾಭಾರತವನ್ನು ನೀಡಿ ಅದಕ್ಕೆ ಅವರಿಂದ ಸಹಿ ಪಡೆದಿದ್ದಾರೆ
ಕುವೈತ್ ನಿವಾಸಿ ಮತ್ತು ವೃತ್ತಿಯಲ್ಲಿ ಪುಸ್ತಕ ಪ್ರಕಾಶಕರಾಗಿರುವ ಇಬ್ರಾಹಿಂ ಎಂಬವರು ಪ್ರಧಾನಿ ಮೋದಿಯವರ ಕುವೈತ್ ಭೇಟಿಗೂ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದರು. ಅದೇನೆಂದರೆ ಇಬ್ರಾಹಿಂ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಅರೇಬಿಕ್ ಭಾಷೆಯಲ್ಲಿ ಬರೆದು ಪ್ರಕಟಿಸಿದ್ದಾರೆ. ಇನ್ನು ಈ ಗ್ರಂಥಗಳನ್ನು ಅರೇಬಿಕ್ ಭಾಷೆಯಲ್ಲಿ ಬರೆಯಲು ಬರೋಬ್ಬರಿ 2 ವರ್ಷಗಳು ಬೇಕಾಯಿತು ಎಂದು ಇಬ್ರಾಹಿಂ ಹೇಳಿದ್ದಾರೆ.
ರಾಮಾಯಣ ಮತ್ತು ಮಹಾಭಾರತ ಬರೆದ ಪ್ರಕಾಶಕರ ಬಳಿ ಅನುಭವವನ್ನು ಕೇಳಿದಾಗ, ಇದನ್ನು ಬರೆಯುವ ಮೂಲಕ ಭಾರತೀಯ ಸಂಸ್ಕೃತಿಯ ಜ್ಞಾನ ತಿಳಿಯಲು ಬಹಳಷ್ಟು ಸಹಕಾರಿಯಾಯಿತು ಎಂದು ಹೇಳಿದ್ದಾರೆ. ಇನ್ನು ಅರೇಬಿಕ್ ಭಾಷೆಯಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಗ್ರಂಥಗಳು ಪ್ರಕಟನೆ ಅಗುತ್ತಿದೆ ಎಂದರೆ ಇಡೀ ದೇಶಕ್ಕೆ ಹೆಮ್ಮೆಯ ಪಡುವ ವಿಷಯವಾಗಿದೆ. ಪ್ರಸ್ತುತ, ಇದನ್ನು ಪ್ರಧಾನಿ ಮೋದಿ ಮತ್ತು ಕುವೈತ್ ಭೇಟಿಗೆ ಲಿಂಕ್ ಮಾಡಲಾಗುತ್ತಿದ್ದು, ಮೋದಿಯವರು ಈ ಗ್ರಂಥಗಳನ್ನು ಹಿಡಿದುಕೊಂಡು ಸಹಿ ಹಾಕುತ್ತಿರುವ ಫೋಟೋ ಕೂಡಾ ವೈರಲ್ ಆಗುತ್ತಿದೆ.