ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸೌಧಕ್ಕೆ ಉತ್ತಮ ಮತ್ತು ವ್ಯವಸ್ಥಿತವಾದ ರಕ್ಷಣೆ ಇದೆ. ಇದರ ನಡುವೆ ಒಂದು ಸಾವಿರ ಜನ ಪಾಸ್ ಇಲ್ಲದೆ ಹೇಗೆ ವಿಧಾನಸೌಧದ ಒಳಗೆ ಬಂದರು. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮಾನಸಿಕತೆ ಇದ್ದವರನ್ನು ಪೊಲೀಸರು ಹೇಗೆ ಒಳಗೆ ಬಿಟ್ಟರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ರಾಜ್ಯಸಭಾ ಸದಸ್ಯರಾಗಿ ಗೆದ್ದಿರುವ ನಾಸೀರ್ ಹುಸೇನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ನಾಸೀರ್ ಬೆಂಬಲಿಗರು ಹಾಗು ನಾಸೀರ್ ಸಂಪರ್ಕ ಯಾರ ಜೊತೆ ಇದೆ. ಅಲ್ಲಿ ಬಂದಿರುವ ಯುವಕರ ಸಂಪರ್ಕ ಯಾರ ಜೊತೆ ಇದೆ ಎಂದು ತನಿಖೆ ನಡೆಯಬೇಕಾಗಿದೆ ಎಂದರು.
ಈ ಪ್ರಕರಣದ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರದ ಗುಮಾನಿ ಇದ್ದು, ಭಾರತವನ್ನು ವಿಭಜನೆ ಮಾಡುವ ಮಾತನ್ನು ಕಾಂಗ್ರೆಸ್ ಆಡುತ್ತಿದೆ. ದೇಶದಲ್ಲಿ ಗೊಂದಲ ನಿರ್ಮಾಣ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಓಲೈಕೆ ಮಾಡುವ ಉದ್ದೇಶದಿಂದ ಕಚೇರಿ, ಮನೆಯೊಳಗೆ ಸಿದ್ದರಾಮಯ್ಯ ಯಾರನ್ನು ಬೇಕಾದರೂ ಬಿಟ್ಟುಕೊಳ್ಳುತ್ತಿದ್ದಾರೆ. ಪ್ರಕರಣವನ್ನು ಎನ್ ಐಎ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದರು.
ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದೇವೆ. ಯಾವುದೇ ಸರ್ಕಾರಗಳ ಅಧಿಕಾರ ಶಾಶ್ವತ ಅಲ್ಲ. ಘೋಷಣೆ ಕೂಗಿದ್ದ ಆರೋಪಿಗಳ ಬಂಧನವಾಗಿಲ್ಲ ನಾಸೀರ್ ಅವರ ವಿಚಾರಣೆ ನಡೆದಿಲ್ಲ ಎಂದರು.