ಪಾಕ್ ಪರ ಬೇಹುಗಾರಿಕೆ ಆರೋಪಿ ಜ್ಯೋತಿ ಮಲ್ಹೋತ್ರಾ ಕಾಸರಗೋಡಿಗೂ ಬಂದಿದ್ದಾಳೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಡಿ ಬಂಧಿತಳಾಗಿರುವ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯ ಉದ್ಘಾಟನೆ ವೇಳೆ ಕಾಸರಗೋಡಿಗೂ ಬಂದಿದ್ದಾಳೆಂಬ ಶಂಕೆ ಹರಿಯಾಣ ಪೊಲೀಸರನ್ನು ಕಾಡುತ್ತಿದೆ.

2023 ರಲ್ಲಿ ಜ್ಯೋತಿ ಮಲ್ಹೋತ್ರಾ ಮೊತ್ತಮೊದಲಾಗಿ ಕೇರಳ ಸಂದರ್ಶಿಸಿದ್ದು ಆ ಬಳಿಕ ಮೂರು ಬಾರಿ ಆಕೆ ಇಲ್ಲಿಗೆ ಆಗಮಿಸಿದ್ದಳು. ಕೇರಳ ಸಂದರ್ಶನದ ವಿಡಿಯೋ ದೃಶ್ಯಗಳನ್ನು ಆಕೆ ತನ್ನ ಯೂಟ್ಯೂಬ್ ಚ್ಯಾನೆಲ್‌ನಲ್ಲೂ ಹಂಚಿಕೊಂಡಿದ್ದಳು. 2023ನೇ ಆಗಸ್ಟ್‌ನಲ್ಲಿ ಜ್ಯೋತಿ ತಿರುವನಂತಪುರಕ್ಕೆ ಮೊದಲ ಬಾರಿಗೆ ಆಗಮಿಸಿದ್ದಳು.

ಕೇರಳಕ್ಕೆ ಮಂಜೂರು ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿಯ ಉದ್ಘಾಟನಾ ಸಮಾರಂಭದ ವೇಳೆ ಆಕೆ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಂಬಯಿಯಿಂದ ನೇರವಾಗಿ ಕಾಸರಗೋಡಿಗೆ ಆಗಮಿಸಿ ವಂದೇ ಭಾರತ್ ರೈಲು ಸೇವೆಯ ಉದ್ಘಾಟನಾ ಸಮಾರಂಭದಲ್ಲೂ ಭಾಗವಹಿಸಿದ್ದಳೆಂದೂ ನಂತರ ವಂದೇ ಭಾರತ್ ರೈಲಿನಲ್ಲಿ ಆಕೆ ತಿರುವನಂತಪುರಕ್ಕೆ ತೆರಳಿದ್ದಾಳೆಂದೂ ತಿಳಿದು ಬಂದಿದೆ.

ಮರುದಿನ ಆಕೆ ತಿರುವನಂತಪುರದಿಂದ ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಮುಂಬಯಿಗೆ ಹಿಂತಿರುಗಿದ್ದಾಳೆಂದು ಹರಿಯಾಣ ಪೊಲೀಸರಿಗೆ ಮಾಹಿತಿ ಲಭಿಸಿದೆ. ನಂತರ ಆಕೆ ಕಣ್ಣೂರು ಮತ್ತು ಕೊಚ್ಚಿಗೂ ಭೇಟಿ ನೀಡಿದ್ದಳು. ಆದರೆ ಅದರ ವಿಡಿಯೋ ಚಿತ್ರಗಳನ್ನು ಆಕೆ ತನ್ನ ಯೂಟ್ಯೂಬ್ ಚ್ಯಾನೆಲ್‌ನಲ್ಲಿ ಹಂಚಿಕೊಂಡಿರಲಿಲ್ಲ. ಅದಕ್ಕಿರುವ ಕಾರಣದ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಭಾರತದ ಶತ್ರು ದೇಶವಾದ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಂತೆ ಜ್ಯೋತಿ ಮಲ್ಹೋತ್ರಾ ಸೇರಿದಂತೆ 12 ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಕಾಸರಗೋಡಿನ ವ್ಯಕ್ತಿಗಳೊಂದಿಗೆ ನಂಟು ಕುರಿತು ತನಿಖೆ
ಜ್ಯೋತಿಯು ಟ್ರಾವೆಲ್ ವಿತ್ ಜೋ ಎಂಬ ಯೂಟ್ಯೂಬ್ ಚ್ಯಾನೆಲ್ ನಡೆಸುತ್ತಿದ್ದಳು . ಹರಿಯಾಣ ಪೊಲೀಸರ ವರದಿ ಪ್ರಕಾರ ಭಾರತಕ್ಕೆ ಸಂಬಂಧಿಸಿದ ಅತೀ ಸೂಕ್ಷ್ಮ ಮಾಹಿತಿಗಳನ್ನು ಆಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಒದಗಿಸಿದ್ದಾಳೆ. ಇನ್ನೊಂದೆಡೆ ಕಾಸರಗೋಡಿಗೆ ಆಗಮಿಸಿದ್ದ ಜ್ಯೋತಿ ಮಲ್ಹೋತ್ರಾ ಇಲ್ಲಿನ ವ್ಯಕ್ತಿಗಳೊಂದಿಗೆ ಯಾವುದೇ ಸಂಪರ್ಕ ಹೊಂದಿದ್ದಾಳೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲು ಹೈರ್ಯನಪೊಲೀಸರು ನಿರ್ಧರಿಸಿದ್ದು, ಈ ಬಗ್ಗೆ ಕೇರಳ ಪೊಲೀಸರ ಸಹಾಯ ಯಾಚಿಸಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!