ಹೊಸದಿಗಂತ ವರದಿ ಸುಳ್ಯ:
ಸುಳ್ಯ ಡಿಗ್ರಿ ಕಾಲೇಜ್ ಕನ್ನಡ ಸಹಾಯಕ ಪ್ರಾಧ್ಯಪಕರೊಬ್ಬರು ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೈಸೂರು ಕೆ.ಆರ್ ನಗರದ ಬೇರ್ಯ ಮೂಲದ ಮಂಜು. ಪಿ(40) ಮಧ್ಯಾಹ್ನ ತೀವ್ರ ಅಸ್ವಸ್ಥತರಾಗಿ ಮೆಡಿಕಲ್ಸ್ ಬಳಿ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ವಿದ್ಯಾರ್ಥಿ ಕೃತಿಕ್ ಬಳಿ ನನಗೆ ತುಂಬಾ ತಲೆನೋವಿದೆ ಎಂದು ಹೇಳಿಕೊಂಡಿದ್ದರು.ಆಗ ವಿದ್ಯಾರ್ಥಿ ಅವರನ್ನು ರೂಮಿಗೆ ಕರೆದುಕೊಂಡು ಬಂದಿದ್ದ. ನಾನು ರೆಸ್ಟ್ ಮಾಡುತ್ತೇನೆ ನೀನು ಹೊರಡು ಎಂದು ವಿದ್ಯಾರ್ಥಿಯನ್ನು ಕಾಲೇಜಿಗೆ ಕಳುಹಿಸಿದ್ದರು.
ಆ ಬಳಿಕ ವಿಪರೀತ ನೋವು ಕಾಣಿಸಿದ ಹಿನ್ನಲೆಯಲ್ಲಿ ಸ್ಥಳೀಯ ಖಾಸಗಿ ಮೆಡಿಕಲ್ ಗೆ ತೆರಳಿ ಔಷಧ ಖರೀದಿಸಲು ಬಂದಾಗ ಅಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ಸ್ಥಳೀಯ ಮೆಡಿಕಲ್ ನವರು ಆಸ್ಪತ್ರೆಗೆ ದಾಖಲಿಸಿದ್ದು ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಮೃತರು ಪತ್ನಿ ಪವಿತ್ರ ಹಾಗೂ ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೃತರು ಈ ಹಿಂದೆ ಕೆ.ಆರ್ ನಗರದಲ್ಲಿ ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಕೆ ಸೆಟ್ ಪರೀಕ್ಷೆಯನ್ನು ಉತ್ತೀರ್ಣರಾಗಿ 2024 ರ ನವಂಬರ್ ನಲ್ಲಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಾಧ್ಯಾಪಕರ ನಿಧನಕ್ಕೆ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.



