Sunday, January 11, 2026

ಅಕ್ರಮ ಗೋಸಾಗಾಟ, ಗೋಕಳ್ಳತನ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲ ಆರೋಪ: ಹಿಂದು ಜಾಗರಣ ವೇದಿಕೆಯಿಂದ ಪ್ರತಿಭಟನೆ

ಹೊಸ ದಿಗಂತ ವರದಿ,ಸೋಮವಾರಪೇಟೆ:

ಅಕ್ರಮ ಗೋಸಾಗಾಟ, ಗೋಕಳ್ಳತನ, ಗೊಹತ್ಯೆ, ಗೋಮಾಂಸ ಮಾರಾಟ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿದೆ.
ಇದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದ ಹಿಂದು ಜಾಗರಣ ವೇದಿಕೆ ಸದಸ್ಯರು ಪಟ್ಟಣದ ಪೊಲೀಸ್ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

ಹಿಂದುಪರ ಹೋರಾಟಗಾರರನ್ನು ಠಾಣೆಯಲ್ಲಿ ಕ್ರಿಮಿನಲ್‌ಗಳಂತೆ ನೋಡಲಾಗುತ್ತಿದೆ. ಸೌಜನ್ಯಕ್ಕಾದರೂ ಕುಳಿತುಕೊಳ್ಳಿ ಎಂದು ಹೇಳುತ್ತಿಲ್ಲ ಎಂದು ಇನ್ಸ್ಪೆಕ್ಟರ್ ಮುದ್ದುಮಾದೇವ ವಿರುದ್ಧ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.

ಈಚೆಗೆ ಕಾಗಡೀಕಟ್ಟೆ ಸಮೀಪ ಗೋಸಾಗಾಟ ಮಾಡುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಕಳ್ಳರ ಬೆಂಗಾವಲಿಗಿದ್ದ ವಾಹನದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಪ್ರಕರಣದ ನಿಜವಾದ ಆರೋಪಿಗಳನ್ನು ಕೂಡಲೆ ಬಂಧಿಸದಿದ್ದರೆ, ಸೋಮವಾರಪೇಟೆ ಬಂದ್ ಗೆ ಕರೆ ನೀಡುವುದಾಗಿ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಎಚ್ಚರಿಸಿದರು.

ಪಟ್ಟಣದ ಸುತ್ತಮುತ್ತ ರಾತ್ರಿ ಪೊಲೀಸ್ ಬೀಟ್‌ಯಿದ್ದರೂ ವಾಹನಗಳಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದೆ. ಟಿಂಬರ್ ಲಾರಿಗಳು ತಡೆಯವುದೇ ಕೆಲವು ಪೊಲೀಸರ ಕೆಲಸವಾಗಿದೆ ಎಂದು ದೂರಿದರು.

ಒಂದು ಹಂತದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ತಿರುಗಿಬಿದ್ದ ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡು ನೀವು ಈ ಹಿಂದೆ ಅಮಾನತ್ತುಗೊಂಡು ಇಲ್ಲಿಗೆ ಬಂದಿದ್ದೀರಿ ಆದರೂ ನಿಮ್ಮ ವರ್ತನೆ ಸರಿಪಡಿಸಿಕೊಂಡಿಲ್ಲ ಎಲ್ಲರನ್ನೂ ಅನುಮಾನಾಸ್ಪದವಾಗಿಯೇ ನೋಡುತ್ತೀರಿ ಮತ್ತು ಕೇವಲವಾಗಿ ಕಾಣುತ್ತೀರಿ ಇದನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದೆ ಕಷ್ಟವಾಗಬಹುದು ಎಂದು ಎಚ್ಚರಿಸಿದರು.

ಹೊರ ರಾಜ್ಯದ ಕಾರ್ಮಿಕರ ಆಧಾರಕಾರ್ಡ್ಗಳನ್ನು ಪೊಲೀಸ್ ಇಲಾಖೆ ಆ್ಯಪ್ ಮೂಲಕ ಪರಿಶೀಲನೆ ಮಾಡಲಾಗುತ್ತಿದೆ. ನಕಲಿ ಕಾರ್ಡ್ಗಳ ಪತ್ತೆಯಾಗುತ್ತದೆ. ಪಟ್ಟಣದಲ್ಲಿ ಅನುಮಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಇನ್ಸ್ಪೆಕ್ಟರ್ ಮುದ್ದು ಮಹಾದೇವ ಹೇಳಿದರು.

ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುವ ವಾಹನ ಅಪಘಾತವಾಗಿದ್ದು, ಅದರಲ್ಲಿದ್ದ ಓರ್ವ ಆರೋಪಿಯನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬೆಂಗಾವಲಿಗಿದ್ದ ವಾಹನನ್ನೂ ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ವೇದಿಕೆ ಪ್ರಾಂತ ಕಾರ್ಯಕಾರಣಿ ಸುನಿಲ್ ಮಾದಾಪುರ, ಸಹ ಸಂಯೋಜಕರಾದ ಕುಮಾರ್ ಮೇಕೇರಿ, ಶರತ್ ಪೊನ್ನಂಪೇಟೆ, ಯೋಗೇಶ್ ವಿರಾಜಪೇಟೆ, ತಾಲ್ಲೂಕು ಸಂಯೋಜಕ ಎಂ.ಉಮೇಶ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಪರಮೇಶ್ ಮತ್ತಿತರರು ಇದ್ದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!