ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತ ಕಳ್ಳತನ ಆರೋಪ ಮಾಡುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ (Delhi) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ , ಆರೋಪವನ್ನು ಸಾಬೀತು ಪಡಿಸುವಂತೆ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.
ಮತಗಳವು ಆರೋಪವನ್ನು ಸಾಕ್ಷಿ ಸಮೇತ ಅಫಿಡವಿತ್ ಮೂಲಕ 7 ದಿನಗಳೊಳಗೆ ಸಲ್ಲಿಸಬೇಕು. ಇಲ್ಲದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಚುನಾವಣಾ ಆಯೋಗ ರಾಹುಲ್ ಗಾಂಧಿಗೆ ತಾಕೀತು ಮಾಡಿದೆ.
ಅಫಿಡವಿತ್ಗೆ ಸಹಿ ಮಾಡಿ ಅಥವಾ ಕ್ಷಮೆಯಾಚಿಸಿ. ಇದು ಬಿಟ್ಟು 3ನೇ ಆಯ್ಕೆಗಳಿಲ್ಲ. ಒಂದು ವೇಳೆ 7 ದಿನಗೊಳಗಾಗಿ ರಾಹುಲ್ ಗಾಂಧಿ ಸಾಕ್ಷಿ ಸಮೇತ ಅಫಿಡವಿತ್ ಸಲ್ಲಿಸದಿದ್ದರೆ ಆರೋಪಗಳೆಲ್ಲ ಸುಳ್ಳು ಎಂದು ಪರಿಗಣಿಸಲಾಗುತ್ತದೆ ಎಂಬುದಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದರು.
ಚುನಾವಣಾ ಆಯೋಗದ ಹೆಗಲ ಮೇಲೆ ಬಂದೂಕು ಹಿಡಿದು ಮತದಾರರನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿರುವಾಗ ಚುನಾವಣಾ ಆಯೋಗವು ಮತದಾರರೊಂದಿಗೆ ನಿರ್ಭಯವಾಗಿ ನಿಂತಿದೆ. ಮತಗಳ್ಳತನ ಆಗಿದೆ ಎನ್ನುವ ಆರೋಪ ಸರಿಯಾದುದಲ್ಲ. ಸುಳ್ಳು ಹೇಳುವ ಮೂಲಕ ತಾವು ಸಂವಿಧಾನವನ್ನು ಅಪಮಾನಿಸುತ್ತಿದ್ದೀರಿ ಎಂದು ಹೇಳಿದ್ದಾರೆ.