ಹೊಸದಿಗಂತ ವರದಿ ಮಡಿಕೇರಿ:
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿರುವ ರಾಜ್ಯ ಸರ್ಕಾರ ಈ ಅನುಕೂಲವನ್ನು ರಾಜ್ಯದ ಹಿರಿಯ ನಾಗರಿಕರಿಗೂ ಒದಗಿಸಿಕೊಡಬೇಕೆಂದು ರಾಜ್ಯ ಸಹಕಾರ ಭಾರತಿ ಉಪಾದ್ಯಕ್ಷ ಎನ್.ಎ. ರವಿಬಸಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವ ಅವರು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 30ರಷ್ಟು ಹಿರಿಯ ನಾಗರಿಕರಿದ್ದಾರೆ. ರಾಜ್ಯ ಸರಕಾರ ಈ ಸೌಲಭ್ಯವನ್ನು ಒದಗಿಸಿದಲ್ಲಿ ಇಳಿ ವಯಸ್ಸಿನ ಹಲವು ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಸರಕಾರ ಈ ನಿಟ್ಟಿನಲ್ಲಿ ಕೂಡಲೇ ಗಮನಹರಿಸಿ ಹಿರಿಯ ನಾಗರಿಕರಿಗೂ ಉಚಿತ ಬಸ್ ಪ್ರಯಾಣದ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಶಕ್ತಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೂ ಈ ಸೌಲಭ್ಯ ನೀಡಿ ಎಂದು ರವಿಬಸಪ್ಪ ಕೋರಿದ್ದಾರೆ.