ಹೊಸದಿಗಂತ ವರದಿ ಹಾವೇರಿ:
ಕಳೆದ 40 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಕೆಪಿಸಿಸಿ ಪದವೀದರ ಕ್ಷೇತ್ರದ ರಾಜ್ಯಾದ್ಯಕ್ಷ ಆರ್. ಎಂ. ಕುಬೇರಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ನನ್ನ ತವರು ಜಿಲ್ಲೆ, ಇಲ್ಲಿ 40 ವರ್ಷದಿಂದ ಕೆಲಸ ಮಾಡಿದ್ದೇನೆ. ತಳಮಟ್ಟದ ಸಂಘಟನೆ ಹೊಂದಿದ್ದೇನೆ. ಅಲ್ಲದೇ ಇಲ್ಲಿನ ಸಂಸದರು ಕೆಲಸ ಮಾಡಿಲ್ಲ, ಯಾವುದೇ ಕೈಗಾರಿಕೆ ಚಟಿವಟಿಕೆಗಳು ನಡೆದಿಲ್ಲ. ಕನಿಷ್ಟ 50 ಜನಕ್ಕೆ ಕೆಲಸ ಸಿಕ್ಕಿಲ್ಲ. ಕೇಂದ್ರದ ಒಂದೂ ಯೋಜನೆ ಇಲ್ಲಿಗೆ ದೊರೆತಿಲ್ಲ. ಜಿಲ್ಲೆಗೆ ಒಂದೂ ನೀರಾವರಿ ಯೋಜನೆಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಡಿಫೆನ್ಸ್ ಸೇರಿದಂತೆ ಯಾವುದೇ ಕೈಗಾರಿಕೆಗಳನ್ನು ಜಿಲ್ಲೆಗೆ ತರುವಲ್ಲಿ ಸಂಸದರು ವಿಫಲರಾಗಿದ್ದಾರೆ. ಕಳೆದ 10 ವರ್ಷಗಳಿಂದ ಯಾವುದೇ ಸೌಲಭ್ಯ ಜನಸಾಮಾನ್ಯರಿಗೆ ಸಿಗುತ್ತಿಲ್ಲ ಎಂದು ದೂರಿದರು.
ನಾನು ಗ್ರಾಮೀಣ ಜನರ ಬದುಕಿನಲ್ಲಿ ಬದಲಾವಣೆ ತರಲು ಶ್ರಮಿಸಲು ಬದ್ದನಾಗಿದ್ದೇನೆ. ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಉದ್ಯಮ, ಉದ್ಯೋಗಗಳ ಅಗತ್ಯವಿರುವುದನ್ನು ಮನಗಂಡಿದ್ದೇನೆ. ಈ ಕ್ಷೇತ್ರದಲ್ಲಿ ನನಗೆ ಹೆಚ್ಚು ಅನುಭವ ಇದೆ. ಈ ಬಗ್ಗೆ ಕೈ ನಾಯಕರು ಸರ್ವೆ ನಡೆಸಿ ತೀರ್ಮಾನ ಕೈಗೊಳ್ಳಲಿ ಎಂದು ಮಾಧ್ಯಮಗಳ ಮೂಲಕ ಕೈ ನಾಯಕರಲ್ಲಿ ಮನವಿ ಮಾಡಿಕೊಂಡರು.
ನನಗೆ ಒಂದು ಬಾರಿ ಅವಕಾಶ ಕೊಡಲಿ. ಕೆಲ ಹಿರಿಯರ ಒತ್ತಾಸೆ, ಸಲಹೆ ಮೇರೆಗೆ ಲೋಕಸಭೆ ಚುನಾವಣೆಗೆ ಸಿದ್ದನಾಗಿದ್ದೇನೆ. ಇದುವರೆಗೂ ರಾಜ್ಯ ನಾಯಕರಿಗೆ ಮನವಿ ಮಾಡಿಲ್ಲ, ಇನ್ಮೆಲೆ ಮಾಡುತ್ತೇನೆ ಎಂದರು. ಈ ವೇಳೆ ಮಂಜುನಾಥ, ಎಸ್. ಎಚ್. ಮುಲ್ಲಾ ಗೋಪಾಲ ರೆಡ್ಡಿ ಮತ್ತಿತರರು ಇದ್ದರು.